ಬೆಂಗಳೂರು: ಡಿಜೆಹಳ್ಳಿ ಗಲಭೆಕೋರರಿಂದ ಮನೆ ಕಳೆದುಕೊಂಡ ಅಖಂಡ ಶ್ರೀನಿವಾಸ್ ಮೂರ್ತಿ ಒಪ್ಪಿದರೆ ನಮ್ಮ ಸಮುದಾಯದಿಂದಲೇ ಮನೆ ಕಟ್ಟಿಸಿಕೊಡುತ್ತೇವೆ ಎಂದು ಮುಸ್ಲಿಂ ಮುಖಂಡ ಮೌಲಾನಾ ಸಹೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಡಿಜೆ ಹಳ್ಳಿ ಪೊಲೀಸ್ ಠಾಣೆ, ವಾಹನಗಳು ಸೇರಿದಂತೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೂ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದರು. ಶಾಸಕರು ಹುಟ್ಟಿಬೆಳೆದ ಮನೆ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿದ್ದ ಚಿನ್ನ-ಬೆಳ್ಳಿ-ನಗದನ್ನೂ ಗಲಭೆಕೋರರು ಲೂಟಿ ಮಾಡಿದ್ದರು. ಈ ಘಟನೆಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದ್ದು, ದಾಂಧಲೆ ನಡೆಸಿದ ಪುಂಡರಿಂದಲೇ ಹಾನಿ ನಷ್ಟವನ್ನು ಭರಿಸಿಕೊಳ್ಳಬೇಕು, ಅವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗದಂತೆ ಮಾಡಬೇಕು ಎಂಬ ಆಗ್ರಹ ದಟ್ಟವಾಗಿ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಶಾಸಕರ ಮನೆಗೆ ಶುಕ್ರವಾರ ಮುಸ್ಲಿಂ ಸಮುದಾಯದ ಮುಖಂಡರು, ಧರ್ಮಗುರುಗಳು ಭೇಟಿ ನೀಡಿ ಧೈರ್ಯ ತುಂಬಿದರು.
ಇದನ್ನೂ ಓದಿರಿ ಪುಂಡರ ದಾಂಧಲೆ ಬಗ್ಗೆ ಕೊನೆಗೂ ದೂರು ದಾಖಲಿಸಿದ ಅಖಂಡ ಶ್ರೀನಿವಾಸ್ ಮೂರ್ತಿ, ಯಾರ ವಿರುದ್ಧ ಗೊತ್ತಾ?
ಮುಸ್ಲಿಂ ಮುಖಂಡ ಮೌಲಾನಾ ಮುಸ್ತಫಾ ರಿಫಾಯಿ, ಮೌಲಾನಾ ಸಹೀರ್ ಅಹ್ಮದ್ ಖಾನ್ ಜತೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತಿತರರು ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದರು. ಗಲಭೆಕೋರರು ನಾಶ ಮಾಡಿರುವ ಮನೆಯನ್ನು ವೀಕ್ಷಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಮೌಲನಾ ಸಹೀರ್ ಅಹ್ಮದ್ ಖಾನ್, ಅಖಂಡ ಶ್ರೀನಿವಾಸ್ ಮೂರ್ತಿ ಜತೆ ನಾವಿದ್ದೇವೆ. ಕಿಡಿಗೇಡಿಗಳ ಕೃತ್ಯದ ಕುರಿತು ಶಾಸಕರ ಬಳಿ ಕ್ಷಮೆ ಕೇಳುತ್ತೇವೆ. ಶಾಸಕರು ಒಪ್ಪಿದರೆ ನಮ್ಮ ಸಮುದಾಯದಿಂದಲೇ ಮನೆ ಕಟ್ಟಿಸಿಕೊಡುತ್ತೇವೆ ಎಂದರು.
ನಮ್ಮ ಧರ್ಮ ಗುರುಗಳು ಮನೆ ಕಟ್ಟಿಸಿಕೊಡುವುದಾಗಿ ಹೇಳಿದ್ದಾರೆ. ಶಾಸಕರು ಒಪ್ಪಿದರೆ ನಮ್ಮ ಸ್ವಂತ ಹಣದಿಂದ ಮನೆ ನಿಮಿರ್ಸಿಕೊಡುತ್ತೇವೆ. ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು. ತಪ್ಪಿತಸ್ಥರಿಗೆ ಕಾನೂನಿನ ಅನ್ವಯ ಶಿಕ್ಷೆಯಾಗಲಿದೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ಅಖಂಡ ಶ್ರೀನಿವಾಸ್ ಮನೆಗೆ ಮುಸ್ಲಿಂ ಮುಖಂಡರು ಭೇಟಿ, ಮನೆ ಕಟ್ಟಿಸಿಕೊಡುವುದಾಗಿ ಭರವಸೆ! Akhanda Srinivas Murthy
ಅಖಂಡ ಶ್ರೀನಿವಾಸ್ ಮನೆಗೆ ಮುಸ್ಲಿಂ ಮುಖಂಡರು ಭೇಟಿ, ಮನೆ ಕಟ್ಟಿಸಿಕೊಡುವುದಾಗಿ ಭರವಸೆ! #MuslimLeaders #ZameerAhmedKhan #Visits #AkhandaSrinivasMurthyHouse
Posted by Dighvijay News – ದಿಗ್ವಿಜಯ ನ್ಯೂಸ್ on Friday, August 14, 2020