ಮಸ್ಕಿ: ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ, ಜನಕಲ್ಯಾಣ ಮಾಡುವದನ್ನು ಬಿಟ್ಟು ಹಣ ಲೂಟಿ ಮಾಡುವ ಮೂಲಕ ದುರಾಡಳಿತ ನಡೆಸಿದ್ದನ್ನು ನೋಡಿದ್ದೀರಿ. ಈ ಸಲದ ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕೆಂದು ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಉದ್ಬಾಳ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಕಡಬೂರು ಗ್ರಾಮದಲ್ಲಿ ಶುಕ್ರವಾರ ಮತಯಾಚನೆ ನಡೆಸಿ ಮಾತನಾಡಿದರು. ಬಡವರ, ದೀನ- ದಲಿತರ ಅಭಿವೃದ್ಧಿ ಕಾಂಗ್ರೆಸ್ನಿಂದ ಸಾಧ್ಯ. ಕಾಂಗ್ರೆಸ್ ಪಕ್ಷದ ಹಸ್ತದ ಚಿಹ್ನೆಗೆ ಮತ ನೀಡಬೇಕು. ಕಳೆದ ಬಾರಿ ಉಪ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದೀರಿ.
ನನಗೆ ಸಿಕ್ಕ ಕಡಿಮೆ ಅವಧಿಯಲ್ಲಿ ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಬಾರಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿರಿ. ನಿಮ್ಮ ಮನೆಯ ಮಗನಾಗಿ ದುಡಿಯುವುದಾಗಿ ಹೇಳಿದರು.
200 ಯುನಿಟ್ ವಿದ್ಯುತ್ ಉಚಿತ
ಕಾಂಗ್ರೆಸ್ ಮಾತು ಕೊಟ್ಟಂತೆ ನಡೆದುಕೊಳ್ಳುತ್ತದೆ ಎಂಬುದಕ್ಕೆ ಸಿದ್ದರಾಮಯ್ಯ ಸರ್ಕಾರ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಜಾರಿಗೊಳಿಸಿರುವುದೇ ಸಾಕ್ಷಿಯಾಗಿದೆ. ಅದರಂತೆ ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ 2 ಸಾವಿರ ರೂ. ಧನ ಸಹಾಯ ಸೇರಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದು, ಅವುಗಳನ್ನು ಈಡೇರಿಸುವುದಾಗಿ ತಿಳಿಸಿದರು.
5 ಎ ಕಾಲುವೆ ಯೋಜನೆ ಜಾರಿಗೆ ಕ್ರಮ
ಮಸ್ಕಿ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ, 5 ಎ ಕಾಲುವೆ ಯೋಜನೆ ಜಾರಿಗೊಳಿಸುವುದು, ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಒದದಗಿಸುವುದು ಸೇರಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವೆ. ಅವುಗಳ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಮತ ನೀಡಿ ಎಂದು ಬಸನಗೌಡ ತುರ್ವಿಹಾಳ ಮನವಿ ಮಾಡಿದರು.
ಇದನ್ನೂ ಓದಿ: ನಿಖಿಲ್ನನ್ನು ಗೆಲ್ಲಿಸಿಕೊಡಿ ಮೊಮ್ಮಗನ ಪರ ಪ್ರಚಾರದಲ್ಲಿ ಗದ್ಗದಿತರಾದ ದೇವೇಗೌಡ
ಹುಲ್ಲೂರು, ಉದ್ಬಾಳ, ಸುಂಕನೂರು, ಚಿಕ್ಕ ಕಡಬೂರು, ಗುಡುದೂರು, ಹೇಡಗಿಬಾಳ, ಮೇರನಾಳ, ಗೋನಾಳ, ರಂಗಾಪೂರು, ದೀನಸಮುದ್ರ, ಹಸಮಕಲ್ಲ ಗ್ರಾಮಗಳಲ್ಲಿ ಆರ್.ಬಸನಗೌಡ ತುರ್ವಿಹಾಳ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಮಸ್ಕಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಸಿದ್ದನಗೌಡ ಮಾಟೂರು ಇದ್ದರು.