ಬಂಗಾರಪೇಟೆ : ಅಣ್ಣನ ಮಕ್ಕಳ ಮೇಲಿನ ವ್ಯಾಮೋಹಕ್ಕಾಗಿ ಆತನನ್ನೇ ಕೊಲೆ ಮಾಡಿ ಸುಟ್ಟು ಹಾಕಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ದೇಶಿಹಳ್ಳಿಯಲ್ಲಿ ವಾಸವಾಗಿದ್ದ ರಾಜೇಶ್ (27) ಬಂಧಿತ. ಜ.23ರಂದು ಇಂದಿರಾನಗರ-ಮಲ್ಲಂಗುರ್ಕಿ ರೈಲ್ವೆ ಅಂಡರ್ಪಾಸ್ ಕೆಳಗೆ ಆಟೋ ಸಮೇತ ಅಣ್ಣನ ಶವಕ್ಕೆ ಬೆಂಕಿ ಹಚ್ಚಿದ್ದ. ಮರುದಿನ ಸ್ಥಳೀಯರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತನಿಖೆ ವೇಳೆ ಆಟೋ ಮೃತ ರಮೇಶ್ (29) ಎಂಬಾತನಿಗೆ ಸೇರಿದ್ದು ಎಂದು ಗೊತ್ತಾಗಿದೆ. ಆಟೋ ಮಾಹಿತಿ ಸಿಗುತ್ತಿದ್ದಂತೆ ರಾಜೇಶ್ ಠಾಣೆಗೆ ತೆರಳಿ ಆಟೋ ಗಂಗಮ್ಮನಪಾಳ್ಯದಲ್ಲಿ ವಾಸವಾಗಿರುವ ಅಣ್ಣ ರಮೇಶ್ಗೆ ಸೇರಿದ್ದೆಂದು ಶಂಕೆ ವ್ಯಕ್ತಪಡಿಸಿದ್ದ. ಈ ಮಾಹಿತಿ ಆಧರಿಸಿ ರಾಜೇಶ್(27)ನನ್ನು ವಿಚಾರಿಸಿದಾಗ ಕೊಲೆ ಪ್ರಕರಣ ಬಾಯ್ಬಿಟ್ಟಿದ್ದಾನೆ.
ಅತ್ತಿಗೆ ಅಣ್ಣನನ್ನು ಬಿಟ್ಟು ಹೋಗಿದ್ದರಿಂದ ಅಣ್ಣನ ಚಿಕ್ಕ ಮಕ್ಕಳನ್ನು ನಾನೇ ಪಾಲನೆ ಮಾಡುತ್ತಿದ್ದೆೆ. ರಮೇಶ್ ಆಗಾಗ ಬಂದು ಮಕ್ಕಳನ್ನು ವಾಪಸ್ ನೀಡುವಂತೆ ಗಲಾಟೆ ಮಾಡುತ್ತಿದ್ದ. ಜ. 22ರಂದು ಮನೆಗೆ ಬಂದು ಗಲಾಟೆ ಮಾಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ರಾಜೇಶ್ ಮಚ್ಚಿನಿಂದ ರಮೇಶ್ನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ದೇಶಿಹಳ್ಳಿಯ ಸ್ನೇಹಿತ ಅಜಯ್ ಎಂಬಾತನೊಂದಿಗೆ ಇಂದಿರಾನಗರ-ಮಲ್ಲಂಗುರ್ಕಿ ರೈಲ್ವೆ ಅಂಡರ್ಪಾಸ್ ಕೆಳಗೆ ಪೆಟ್ರೋಲ್ ಹಾಕಿ ಶವದ ಸಮೇತ ಆಟೋಗೆ ಬೆಂಕಿ ಹಚ್ಚಿರುವುದು ತನಿಖೆಯಿಂದ ತಿಳಿದುಬಂದಿದೆ. ಎಸ್ಪಿ ಇಲಾಕಿಯಾ ಕರುಣಾಕರನ್, ಡಿವೈಎಸ್ಪಿ ಬಿ.ಉಮೇಶ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಸುನೀಲ್ಕುಮಾರ್ ಮತ್ತು ಪಿಎಸ್ಐ ಆರ್.ಜಗದೀಶ್ರೆಡ್ಡಿ ನೇತೃತ್ವದಲ್ಲಿ ರಚಿಸಿದ್ದ ತಂಡ ಪ್ರಕರಣ ಭೇದಿಸಿದೆ.