ಬೆಂಗಳೂರು: ಆರ್ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅಲ್ಲ, ‘ಮನಿ’ರತ್ನ ಎಂದು ಜೆಡಿಎಸ್ ಮುಖಂಡ ಟಿ. ಎ. ಶರವಣ ಮುನಿರತ್ನ ಕಾಲೆಳೆದರು.
ಉಪಚುನಾವಣೆ ಹಿನ್ನೆಲೆಯಲ್ಲಿ ಲಗ್ಗೆರೆಯಲ್ಲಿ ಚುನಾವಣಾ ಪ್ರಚಾರದ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿ, ಮುನಿರತ್ನ ಹೆಣ್ಣುಮಗಳ ಸೀರೆ ಎಳೆದ ದುಶ್ಯಾಶನ ಇದ್ದಂತೆ. ದುಶ್ಯಾಸನಂತೆ ಕಾರ್ಪೊರೇಟರ್ ಸೀರೆ ಎಳೆದಿದ್ದರು. ಇವತ್ತು ಮುನಿರತ್ನ ಧರ್ಮರಾಯನಂತೆ ಕಾಣುತ್ತಾರಾ? ಇಂತವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆಂದು ಟೀಕಿಸಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿ, ಜೆಡಿಎಸ್ ಎಲ್ಲಿದೆ ಎನ್ನುತ್ತಾರೆ. ಜೆಡಿಎಸ್ ಎಲ್ಲಿದೆ ಎಂದು ಚಾಮುಂಡೇಶ್ವರಿಯಲ್ಲೇ ತೋರಿಸಿದ್ದೇವೆ. ಎಷ್ಟು ಬಾರಿ ನಿಮಗೆ ಜೆಡಿಎಸ್ ಎಲ್ಲಿದೆ ಎಂದು ತೋರಿಸಬೇಕು ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ವಿರುದ್ಧ ಸೋತಿದ್ದನ್ನು ಶರವಣ ನೆನಪಿಸಿ ತಿರುಗೇಟು ನೀಡಿದರು.
ಇದನ್ನೂ ಓದಿ: ‘ಶ್ವಾಸಕೋಶಕ್ಕೆ ಸೋಂಕು ಹೆಚ್ಚಾಗಿ ತಗುಲಿದೆ..ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ…’
25 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದೇವೆ
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ನ ಎಲ್ಲ ಭಾಗ್ಯ ಮುಂದುವರಿಸಿದೆವು. 25 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದೇವೆ. ಬಡವರ ಬಂಧು ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ 10ಸಾವಿರ ರೂ. ಕಿರುಸಾಲ ನೀಡಿದ್ದೇವೆ. ನೀವು ಬೆಂಗಳೂರಿನವರು ಎಂದು ಭಾವಿಸಬೇಡಿ. ನೀವು ರೈತರ ಮಕ್ಕಳು, ರೈತರ ಅಕೌಂಟಿಗೆ ಎಷ್ಟು ಬಂದಿದೆ ನೋಡಿ. ಬಿಜೆಪಿ ಅಧಿಕಾರ ಬಂದು ಎಷ್ಟು ದಿನಗಳಾಗುತ್ತಿವೆ? ಬಿಜೆಪಿ ಸರ್ಕಾರ ಈವರೆಗೆ ಏನು ಮಾಡಿದೆ? ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮಾತ್ರ ಯಾವುದೇ ನೆರವಿಗೆ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಆರ್.ಆರ್.ನಗರ ಅಭ್ಯರ್ಥಿ ಕೃಷ್ಣಮೂರ್ತಿ ಅಲ್ಲ, ಎಚ್.ಡಿ.ಕುಮಾರಸ್ವಾಮಿ ಅವರೇ ಎಂದು ತಿಳಿದು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು. (ದಿಗ್ವಿಜಯ ನ್ಯೂಸ್)
ಕರೊನಾ ಪರೀಕ್ಷೆಗೆ ಹೆದರಿ ಕಾಳಜಿ ಕೇಂದ್ರ ತೊರೆಯುತ್ತಿರುವ ನಿರಾಶ್ರಿತರು..!