ಕುಂದಾಪುರ: ಜಲಸಿರಿ ಯೋಜನೆ ಪರಿಷ್ಕರಣೆ ಆಗದೆ ಪುರಸಭೆಗೆ ಹಸ್ತಾಂತರಿಸುವುದಕ್ಕೆ ವಿರೋಧ. ಶಾಸ್ತ್ರಿಕಟ್ಟೆ ನವೀಕರಿಸುವಾಗ ಹಳೇ ಶಾಸ್ತ್ರಿ ಮೂರ್ತಿ ಉಳಿಸಲು ಒತ್ತಾಯ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ತ್ಯಾಜ್ಯ ಪುರಸಭೆ ಡಂಪಿಂಗ್ ಯಾರ್ಡ್ಗೆ ಹಾಕುವ ಬಗ್ಗೆ ಆಡಳಿತ ಪಕ್ಷದ ಸ್ಪಷ್ಟತೆನೆಗೆ ಆಗ್ರಹ.ಇವು ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದ ಪ್ರಮುಖ ವಿಷಯಗಳು.
ವಿರೋಧ ಪಕ್ಷದ ಸದಸ್ಯ ಚಂದ್ರಶೇಖರ ಖಾರ್ವಿ ಮಾತನಾಡಿ, ಸಾಲಿಗ್ರಾಮ ಪಪಂ ತ್ಯಾಜ್ಯ ಪುರಸಭೆ ಡಂಪಿಂಗ್ ಯಾರ್ಡ್ನಲ್ಲಿ ಸಂಗ್ರಹಿಸುವ ಬಗ್ಗೆ ಆಡಳಿತ ಪಕ್ಷದ ಸ್ಪಷ್ಟನೆ ಏನು ಎಂದು ಪ್ರಶ್ನಿಸಿದರು.
ಪೂರಕವಾಗಿ ಸದಸ್ಯ ಶ್ರೀಧರ ಶೇರೆಗಾರ್ ಮಾತನಾಡಿ, ತ್ಯಾಜ್ಯ ಪ್ರಮಾಣ ಪ್ರಮಾಣ ಹೆಚ್ಚಿದ್ದು, ಪುರಸಭೆ ಘಟಕಕ್ಕೆ ಡಂಪ್ ಮಾಡುವುದರಿಂದ ಸಮಸ್ಯೆ ಆಗುತ್ತದೆ ಎಂದರು. ಉತ್ತರಿಸಿದ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ತ್ಯಾಜ್ಯ ಡಂಪಿಂಗ್ ಬಗ್ಗೆ ಮುಂದಿನ ಸಭೆಯೊಳಗೆ ನಿರ್ಣಯ ಮಾಡಲಾಗುತ್ತದೆ ಎಂದು ತಿಳಿಸಿದರು. ದೇವಕಿ ಪಿ.ಸಣ್ಣಯ್ಯ, ಅಶ್ವಿನಿ, ನಾಮನಿದೇರ್ಶಕ ಸದಸ್ಯರಾದ ಪುಷ್ಪಾ ಶೇಟ್, ಪ್ರಕಾಶ್ ಖಾರ್ವಿ, ರತ್ನಾಕರ ಶೇರೆಗಾರ್, ಆಡಳಿತ ಸದಸ್ಯ ಪ್ರಭಾಕರ ವಿ., ಸಂತೋಷ ಶೆಟ್ಟಿ, ಕೆ.ಜಿ.ನಿತ್ಯಾನಂದ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.
ದಿನದ ಇಪ್ಪತ್ನಾಲ್ಕು ತಾಸು ನೀರು ಎನ್ನುವ ಪೂರೈಸುವ ಉದ್ದೇಶದಿಂದ ಜಾರಿಗೆ ತಂದ ಜಲಸಿರಿ ಯೋಜನೆಯಲ್ಲಿ ಬೆಳಗ್ಗೆ ಸಂಜೆ ಒಂದೆರಡು ಗಂಟೆ ನೀರು ಕೊಡುತ್ತಾರೆ. ನೀರು ಪೂರೈಕೆ ಸಮಸ್ಯೆ ಆದರೆ ಮಾಹಿತಿ ಕೊಡದೆ ನಿಲ್ಲಿಸುತ್ತಾರೆ. ಯೋಜನೆ ಕ್ರಮಬದ್ಧವಾಗಿ ಆಗದೆ ಪುರಸಭೆ ಹಸ್ತಾಂತರ ಮಾಡಿಕೊಳ್ಳಬಾರದು ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಹೇಳಿದರು. ಹಿರಿಯ ಸದಸ್ಯ ಮೋಹನದಾಸ ಶೆಣೈ ಮಾತನಾಡಿ, ಜಲಸಿರಿ ಯೋಜನೆ ಶೇ.90ರಷ್ಟು ವಿಫಲವಾಗಿದೆ. ಪೈಪ್ಲೈನ್ಗಾಗಿ ಅಗೆದ ರಸ್ತೆ, ಇಂಟರ್ಲಾಕ್ ಅಳವಡಿಕೆ ಕಾಮಗಾರಿ ಸರಿ ಮಾಡಬೇಕು ಎಂದು ಒತ್ತಾಯಿಸಿದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, 13 ವಾರ್ಡ್ಗಳಲ್ಲಿ ನೀರು ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, 10 ವಾರ್ಡ್ಗಳಲ್ಲಿ ಸಮಸ್ಯೆ ಅಗಿದೆ. 120 ಎಚ್.ಪಿ ಮೋಟಾರ್ ಅಳವಡಿಕೆ ನಂತರ ಸರಿಯಾಗುತ್ತದೆ. ಇನ್ನು ಮುಂದೆ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಮಾಹಿತಿ ನೀಡಲಾಗುತ್ತದೆ ಎಂದರು.