ಮುಧೋಳ: ಶುಕ್ರವಾರ ಸಂಜೆಯಿಂದ ಸುರಿದ ಮಳೆಯಿಂದಾಗಿ ಒಂಟಗೋಡಿ ಗ್ರಾಮದ ಮಿರ್ಜಿ ಚನ್ನಾಳ ರಸ್ತೆಯ ಹತ್ತಿರ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿ ಬೈಕ್ ಬಿದ್ದು ಯುವಕನೋರ್ವ ಕೊಚ್ಚಿ ಹೋಗಿ ಶನಿವಾರ ಬೆಳಗ್ಗೆ ಸಾವನಪ್ಪಿದ್ದಾನೆ.
ಮೂಲತ: ಕುಳಲಿ ಗ್ರಾಮದ ಒಂಟಗೋಡಿ ನಿವಾಸಿ, ಮುಧೋಳ ಡಿಸಿಸಿ ಬ್ಯಾಂಕ್ ನೌಕರ ಸಂತೋಷ ಸುಭಾಷ ಅಡವಿ(27) ಮೃತ ವ್ಯಕ್ತಿ. ಚನ್ನಾಳ ಗ್ರಾಮದ ಯುವಕರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶವವನ್ನು ಹೊರಗೆ ತೆಗೆದಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಸಂಗಮೇಶ ಬಾಡಗಿ, ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಲಕ್ಷ ರೂ. ಪರಿಹಾರ ಘೋಷಣೆ
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಸಂಗಮೇಶ ಬಾಡಗಿ ಮಾತನಾಡಿ, ಮುಧೋಳ ಶಾಸಕ ಹಾಗೂ ಡಿಸಿಎಂ ಅವರು ದೂರವಾಣಿ ಮುಖಾಂತರ ಸಂಪರ್ಕಿಸಿ ಮೃತವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ವಿಜಯವಾಣಿಗೆ ತಿಳಿಸಿದರು.