ಮುದಗಲ್: ಸ್ಥಳೀಯ ಎಪಿಎಂಸಿ ಆವರಣದಲ್ಲಿ ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಶನಿವಾರ ಪಡಿತರ ವಿತರಣೆ ವೇಳೆ ನೂಕುನುಗ್ಗಲು ಉಂಟಾಯಿತು.
ಕಟ್ಟಡ ಕಾರ್ಮಿಕರು ಸೇರಿ ಅಸಂಘಟಿತ ಕಾರ್ಮಿಕರಿಗೆ ಸಕ್ಕರೆ, ರವಾ, ಖಾರಪುಡಿ, ಉಪ್ಪು, ಎಣ್ಣೆ ಒಳಗೊಂಡ ಪಡಿತರ ಕಿಟ್ ವಿತರಣೆ ಮಾಡಲು ಇಲಾಖೆ ಮುಂದಾಗಿದೆ. ಕಾರ್ಮಿಕರು ಕಿಟ್ ಪಡೆಯಲು ದಾಖಲೆಯೊಂದಿಗೆ ಕೌಂಟರ್ನಲ್ಲಿ ಹೆಸರು ನೋಂದಾಯಿಸಿ ಟೋಕನ್ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೇಂದ್ರದ ಮುಂದೆ ನಿರೀಕ್ಷೆಗಿಂತ ಹೆಚ್ಚಿನ ಜನ ಟೋಕನ್ಗಾಗಿ ಮುಗಿಬಿದ್ದಿದ್ದರು. ಇದರಿಂದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಜನರು ಸಾಲಾಗಿ ನಿಲ್ಲದೇ ನೂಕು ನುಗ್ಗಲು ಮಾಡಿದ್ದರಿಂದ ಇಲಾಖೆ ಕಿಟ್ ವಿತರಣೆ ಕಾರ್ಯ ಅರ್ಧಕ್ಕೆ ಕೈ ಬಿಡಬೇಕಾಯಿತು. ಆಹಾರ ಕಿಟ್ ವಿತರಣೆ ವೇಳೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರಿಂದ ಕಾರ್ಮಿಕರು ಪರಸ್ಪರ ದೈಹಿಕ ಅಂತರ ಮರೆತಿರುವುದು ಕಂಡು ಬಂತು.