ಶಂಕರ ಈ.ಹೆಬ್ಬಾಳ, ಮುದ್ದೇಬಿಹಾಳ
ಹಣದ ಅಡಚಣೆ ವೇಳೆ ಹೊಲ, ಮನೆ ಮಾರಲು ಹಾಗೂ ನೋಂದಾಯಿಸಲು ಸಾರ್ವಜನಿಕರು ಉಪನೋಂದಣಾಧಿಕಾರಿಗಳ ಕಚೇರಿಯನ್ನು ಅವಲಂಬಿಸುತ್ತಾರೆ. ಆದರೆ, ಮುದ್ದೇಬಿಹಾಳದ ಉಪನೋಂದಣಾಧಿಕಾರಿ ಕಚೇರಿಯಲ್ಲಿ 13 ದಿನಗಳಿಂದ ಯಾವುದೇ ಕಾಗದಪತ್ರವೂ ನೋಂದಾಯಿತವಾಗದೆ ಲಕ್ಷಾಂತರ ರೂ.ಆದಾಯ ಸರ್ಕಾರಕ್ಕೆ ಖೋತಾ ಆಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಸಮಸ್ಯೆ ಏನು?
ಮುದ್ದೇಬಿಹಾಳ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಾ.11ರಂದು ಕಾವೇರಿ ತಂತ್ರಾಂಶದಲ್ಲಿ ದಾಖಲೆಯೊಂದು ಅಪ್ಲೋಡ್ ಆಗದೆ ಇರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆಧಾರ್ ಪತ್ರದ ದಸ್ತಾವೇಜು ಸಂಖ್ಯೆ ಎಂಯುಡಿ-1-8049/2019-20 ಕಾವೇರಿ ತಂತ್ರಾಂಶದ ಸ್ಕಾೃನ್ ಆರ್ಕಿವಲ್ನಲ್ಲಿ ಒಂದು ಬಾರಿ ಸ್ಕಾೃನ್ ಆಗಿದ್ದು, ಸರ್ವರ್ಗೆ ಅಪ್ಲೋಡ್ ಆಗಿಲ್ಲ.
ಅದನ್ನು ಸರಿಪಡಿಸುವಂತೆ ಸ್ಥಳೀಯ ಉಪ ನೋಂದಣಾಧಿಕಾರಿಗಳು ಬೆಂಗಳೂರಿನ ಸಹಾಯಕ ನೋಂದಣಿ ಮಹಾಪರಿವೀಕ್ಷಕರಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದಾರೆ. ಅದಕ್ಕೆ ಸ್ಪಂದಿಸದ ಮೇಲಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಮಾ.16ರಂದು ಅದೇ ವಿಭಾಗದ ಅಧಿಕಾರಿಗಳಿಗೆ ಮತ್ತೆ ಪತ್ರ ಬರೆದಿದ್ದು, ಇನ್ನೂವರೆಗೂ ಅದೇ ಪರಿಸ್ಥಿತಿ ಕಚೇರಿಯಲ್ಲಿದೆ.
ನೋಂದಣಿ ಕಾರ್ಯ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಾಂಡ್ ರೈಟರ್ಗಳು, ಝರಾಕ್ಸ್ ಸೆಂಟರ್ಗಳ ಅಂಗಡಿಗಳಿಗೆ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ಕೆಲಸ ಇಲ್ಲದೆ ದಿನ ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕರೊನಾ ಹೊಡೆತ ಇನ್ನೊಂದೆಡೆ ಮೇಲಧಿಕಾರಿಗಳ ನಿರ್ಲಕ್ಷೃ ಮನೋಭಾವದಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿರುವುದು ತಪ್ಪದಂತಾಗಿದೆ.
ನೋಂದಣಿ ಕಾರ್ಯಕ್ಕೆ ವಿಘ್ನ
ನಿತ್ಯವೂ ಅಧಿಕಾರಿಗಳು ಇಂದು ಸರಿ ಹೋಗುತ್ತದೆ. ನಾಳೆ ಸರಿಹೋಗುತ್ತದೆ ಎಂದು ಕಾಲ ದೂಡುತ್ತಿದ್ದು, ಸಾರ್ವಜನಿಕರು ತಮ್ಮ ಹೊಲ,ಮನೆ, ಆಸ್ತಿಗಳ ನೋಂದಣಿ ಕೆಲಸ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ಸಾರ್ವಜನಿಕರಿಗೆ ಇಷ್ಟೊಂದು ಅನನುಕೂಲವಾಗಿದ್ದರೂ ಮೇಲಧಿಕಾರಿಗಳೇಕೆ ಮೌನವಾಗಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.