ಮುದ್ದೇಬಿಹಾಳ: ಬೆಳಗಾವಿ ಜಿಲ್ಲೆ ಪೀರಣವಾಡಿ ಗ್ರಾಮದಲ್ಲಿ ಆ.15 ರಂದು ಸಂಗೊಳ್ಳಿ ರಾಯಣ್ಣನ ಮೂರ್ತಿ ಮತ್ತು ರಾಷ್ಟ್ರಧ್ವಜ ತೆರವುಗೊಳಿಸಿದ ಘಟನೆ ಖಂಡಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಪಡೆಯ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಎದುರು ಸೋಮವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಡಿ.ಜಿ. ಕಳ್ಳಿಮನಿಗೆ ಮನವಿ ಸಲ್ಲಿಸಲಾಯಿತು.
ವಕೀಲ ಸಿದ್ದನಗೌಡ ಬಿರಾದಾರ ಮಾತನಾಡಿ, ರಾಯಣ್ಣನ ಮೂರ್ತಿ ಮತ್ತು ರಾಷ್ಟ್ರಧ್ವಜವನ್ನು ಅಲ್ಲಿನ ಪಿಎಸ್ಐ ಮೂಲಕ ಬೆಳಗಾವಿ ಜಿಲ್ಲಾಡಳಿತವೇ ತೆರವುಗೊಳಿಸಿದೆ. ಇದು ರಾಯಣ್ಣನಿಗೆ ಮಾಡಿದ ಅವಮಾನವಾಗಿದೆ. ಮರಾಠಿಗರ ಕೈಗೊಂಬೆಯಂತೆ ಕೆಲಸ ಮಾಡಿರುವ ಅಧಿಕಾರಿಗಳ ನಡೆ ಖಂಡನೀಯ. ಬೆಳಗಾವಿ ಜಿಲ್ಲಾಧಿಕಾರಿ, ಎಸ್ಪಿ ಎಲ್ಲರಿಗೂ ಧಿಕ್ಕಾರ ಹಾಕುತ್ತೇವೆ. ಪೀರಣವಾಡಿ ಸ್ಥಳದಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಬೇಕು. ಸರ್ಕಾರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಇದಕ್ಕೆ ನಿರ್ಲಕ್ಷ್ಯ ತೋರಿದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.
ಕುರುಬರ ಸಂಘದ ಉಪಾಧ್ಯಕ್ಷರಾದ ಸಂತೋಷ ನಾಯ್ಕೋಡಿ, ಹಣಮಂತ್ರಾಯ ದೇವರಳ್ಳಿ, ಸಂಗಣ್ಣ ಮೇಲಿನಮನಿ, ವಕೀಲ ಪಿ.ಬಿ. ಮಾತಿನ, ಯುವ ಪಡೆಯ ಪ್ರಮುಖರಾದ ಅಡಿವೆಪ್ಪ ಕನ್ನೂರ, ನಾಗರಾಜ ಹಿರೇಕುರುಬರ, ಪರಶುರಾಮ ನಾಗರಬೆಟ್ಟ, ಬಸವರಾಜ ಬೆಳ್ಳಿಕಟ್ಟಿ, ರೇವಣಸಿದ್ದ ಸೋಮನಾಳ, ಬಸವರಾಜ ಹಂದ್ರಾಳ, ಮಂಜು ವಾಲಿಕಾರ, ಶಿವಕುಮಾರ ಮನ್ನೂರ, ಬಸವರಾಜ ಕಂಗಳ, ಪ್ರಕಾಶ ವಾಲಿಕಾರ, ಮಲ್ಲು ಬೂದಿಹಾಳ ಮತ್ತಿತರರು ಪಾಲ್ಗೊಂಡಿದ್ದರು.
ಗ್ರೇಡ್-2 ತಹಸೀಲ್ದಾರ್ ತರಾಟೆಗೆ
ಮನವಿ ಸ್ವೀಕರಿಸಲು ತಡವಾಗಿ ಸ್ಥಳಕ್ಕೆ ಬಂದ ಗ್ರೇಡ್-2 ತಹಸೀಲ್ದಾರ್ ಡಿ.ಜಿ. ಕಳ್ಳಿಮನಿ ಅವರನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಮೂರ್ತಿ ತೆರವಿಗೆ ಕಾರಣರಾದ ಪಿಎಸ್, ಎಸ್ಪಿ, ಬೆಳಗಾವಿ ಜಿಲ್ಲಾಡಳಿತಕ್ಕೆ ಧಿಕ್ಕಾರದ ಘೋಷಣೆ ಕೂಗಿದರು.