ಮುದ್ದೇಬಿಹಾಳ: ಗ್ರಾಮೀಣ ಭಾಗದಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಹೋರಾಡಿದ ಸೇನಾನಿಗಳನ್ನು ನಿತ್ಯವೂ ನೆನೆಯೋಣ ಎಂದು ಹಿರೇಮುರಾಳ ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಬಿ.ಬಿ. ಭೋವಿ ಹೇಳಿದರು.
ತಾಲೂಕಿನ ಹಿರೇಮುರಾಳ ನೀಲಕಂಠೇಶ್ವರ ಸಭಾಭವನದಲ್ಲಿ ಮಂಗಳವಾರ ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಹಮ್ಮಿಕೊಂಡಿದ್ದ ಕೋವಿಡ್ ಸೇನಾನಿಗಳಾದ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಇಲಾಖೆ ನರ್ಸ್ಗಳಿಗೆ ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಹಾಗೂ ಕೋವಿಡ್-19 ತಡೆಗೆ ಶ್ರಮಿಸಿದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ವೈದ್ಯರು ಹಾಗೂ ಪಿಡಿಒ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ತಮ್ಮ ಪ್ರಾಣ ಲೆಕ್ಕಿಸದೆ ಜನರ ಜೀವ ಉಳಿಸುವ ಕಾರ್ಯ ಮಾಡಿದ ಸೇನಾನಿಗಳನ್ನು ನಿತ್ಯ ಮನದಲ್ಲಿ ಸ್ಮರಿಸಬೇಕು ಎಂದರು.
ಶಿಕ್ಷಕ ಎಂ.ಬಿ. ಗುಡಗುಂಟಿ ಮಾತನಾಡಿ, ವೈದ್ಯರು ಹಾಗೂ ಪಂಚಾಯಿತಿ ಆಡಳಿತ ಮಂಡಳಿಗಳ ಕ್ರಿಯಾಶೀಲ ಕಾರ್ಯದಿಂದಲೇ ಇಂದು ಕರೊನಾ ಕೇಸ್ಗಳು ಇಳಿಕೆ ಕಾಣಲು ಕಾರಣವಾಗಿದೆ. ಅವರ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದು ಹೇಳಿದರು.
ಹಿರೇಮುರಾಳ ಗ್ರಾಪಂ ಪ್ರಭಾರ ಪಿಡಿಒ ಪಿ.ಎಸ್. ಕಸನಕ್ಕಿ, ನಾಗರಬೆಟ್ಟ ಪಿಡಿಒ ವೀರೇಶ ಹೂಗಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಿಂಗಣ್ಣ ರಾಮೋಡಗಿ, ನಿರ್ದೇಶಕರಾದ ಬಿ.ಜಿ. ಮಠ, ಎ.ಎನ್. ನಾಡಗೌಡ್ರ, ನಾಗರಬೆಟ್ಟ ಗ್ರಾಪಂ ಅಧ್ಯಕ್ಷೆ ರೇಣುಕಾ ಚಲವಾದಿ, ಡಾ.ಮಲ್ಲಿಕಾರ್ಜುನ ಪ್ಯಾಟಿ, ಚಂದ್ರಶೇಖರ ಕಲಕೇರಿ, ಉಪಾಧ್ಯಕ್ಷ ಮಾರುತಿ ಭೋವೇರ, ಎಸ್.ಎಂ. ಯಾಳವಾರ, ಬಸವರಾಜ ಜೈನಾಪುರ, ಬಸವರಾಜ ಸರೂರ, ಭೂಮಣ್ಣ ತೊಗರಿ, ರಮೇಶ ಇಂಗಳೇಶ್ವರ, ಸಿದ್ದು ವಾಲೀಕಾರ ಇತರರಿದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಬಾಗೇವಾಡಿ ಸ್ವಾಗತಿಸಿದರು. ರುದ್ರು ರಾಮೋಡಗಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಆಶಾ, ಅಂಗನವಾಡಿ, ಆರೋಗ್ಯ ಇಲಾಖೆ ನರ್ಸ್ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.