ನವದೆಹಲಿ: ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆಯಾಗುತ್ತಿರುವುದರಿಂದ ಕ್ರೀಡಾ ಚಟುವಟಿಕೆಗಳಿಗೂ ಪುನರಾರಂಭಗೊಳ್ಳುವ ಆಶಾಭಾವನೆ ಮೂಡಿದೆ. ಕ್ರಿಕೆಟ್ ಚಟುವಟಿಕೆಗೆ ಮರಳುವುದಕ್ಕೂ ಮುನ್ನ ಬಿಸಿಸಿಐ, ಜುಲೈ ತಿಂಗಳಿಂದ 6 ವಾರಗಳ ಕಾಲ ತರಬೇತಿ ಶಿಬಿರ ಆಯೋಜಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ಬಿಸಿಸಿಐ ಕೂಡ ಸುರಕ್ಷತಾ ಸ್ಥಳ ಹುಡುಕಾಟದಲ್ಲಿದೆ. ಆದರೆ, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ಸೋತ ಬಳಿಕ ಕ್ರಿಕೆಟ್ನಿಂದ ದೂರ ಉಳಿದಿರುವ ಮಾಜಿ ನಾಯಕ ಎಂಎಸ್ ಧೋನಿಗೆ ಶಿಬಿರಕ್ಕೆ ಆಹ್ವಾನ ನೀಡಲಾಗುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ವಿಶ್ವ ನಂ. 1 ಟೆನಿಸ್ ತಾರೆ ಜೋಕೊವಿಕ್ ವಿಚ್ಛೇದನ?
ಇದೇ ಅಕ್ಟೋಬರ್-ನವೆಂಬರ್ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಈ ವೇಳೆ ಬಿಸಿಸಿಐ ಐಪಿಎಲ್ ಆಯೋಜಿಸುವ ಚಿಂತನೆಯಲ್ಲಿದೆ. ಇದಕ್ಕೂ ಮೊದಲು ಕಳೆದ ಮೂರು ತಿಂಗಳಿಂದ ಲಾಕ್ ಆಗಿರುವ ಆಟಗಾರರಿಗೆ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ತರಬೇತಿ ಶಿಬಿರ ಅಗತ್ಯವಾಗಿದೆ. ಈಗಾಗಲೇ ಧೋನಿ ಅವರನ್ನು ಕೇಂದ್ರ ಗುತ್ತಿಗೆ ಒಪ್ಪಂದದಿಂದ ಕೈಬಿಡಲಾಗಿತ್ತು. ಇದೀಗ ತರಬೇತಿ ಶಿಬಿರಕ್ಕೂ ಆಹ್ವಾನಿಸುವುದು ಅನುಮಾನ ಮೂಡಿಸಿದೆ.
ಇದನ್ನೂ ಓದಿ: VIDEO: ವೈರಲ್ ಆಗಿದೆ ಜೂನಿಯರ್ ಫುಟ್ಬಾಲ್ ತಾರೆಯ ಫ್ರಿ ಕಿಕ್ಸ್ ವಿಡಿಯೋ
ಒಂದು ವೇಳೆ ಟಿ20 ವಿಶ್ವಕಪ್ ನಡೆದರೆ ಧೋನಿಯನ್ನು ಪರಿಗಣಿಸಬಹುದು, ಇಲ್ಲವಾದರೆ ದ್ವಿಪಕ್ಷೀಯ ಸರಣಿಗಳು ನಡೆದರೆ ಆಯ್ಕೆ ಸಮಿತಿ ಚಿಂತಿಸಬೇಕಾಗುತ್ತದೆ ಎಂದು ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ತಿಳಿಸಿದ್ದಾರೆ.ಆದರೆ, ಟಿ20 ವಿಶ್ವಕಪ್ ನಡೆಯುವುದರ ಬಗ್ಗೆಯೇ ಖಾತ್ರಿಯಿಲ್ಲ ಎಂದಿದ್ದಾರೆ. ಒಂದು ವೇಳೆ ತರಬೇತಿ ಶಿಬಿರ ನಡೆದರೂ ಯುವ ಕ್ರಿಕೆಟಿಗರಿಗೆ ಹೆಚ್ಚು ಅವಕಾಶ ಕಲ್ಪಿಸಬೇಕು ಎಂದು ಮಾಜಿ ಆಟಗಾರ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.