ನವದೆಹಲಿ: ಸಂಸದರು ಗರ್ಭಗುಡಿಯಲ್ಲಿರುವ ಮೂರ್ತಿಗಳಿದ್ದಂತೆ ಅವರಿಗೆ ಯಾವುದೇ ತರಹದ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಹೊಸ ವಿವಾದ ಒಂದನ್ನು ಹುಟ್ಟು ಹಾಕಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಜಾತಿ ಗಣತಿಯ ವಿಚಾರಕ್ಕೆ ಬಂದರೆ ಕೇಂದ್ರ ಸರ್ಕಾರ ವಿಚಲಿತರಾಗಿ ಪ್ರತಿಬಾರಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಒಬಿಸಿ ಪ್ರಾತಿನಿಧ್ಯದ ಕುರಿತು ಅಮಿತ್ ಷಾ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಬಿಜೆಪಿ ಸಂಸದರಿಗೆ ನಿರ್ಧಾರ ತೆಗೆದುಕೊಳ್ಳುವ ಅಥವಾ ಕಾನೂನು ರಚನೆಯಲ್ಲಿ ಭಾಗವಹಿಸುವ ಯಾವುದೇ ಅವಕಾಶವಿಲ್ಲ. ಬಿಜೆಪಿ ಒಂದೇ ಅಲ್ಲಾ ಎಲ್ಲಾ ಪಕ್ಷದ ಸಂಸದರನ್ನು ದೇವರ ಮೂರ್ತಿಗಳಂತೆ ಪ್ರತಿಷ್ಠಾಪಿಸಲಾಗಿದೆ. ಮುಖ್ಯವಾಗಿ ಒಬಿಸಿ ಸಂಸದರನ್ನು ಗರ್ಭಗುಡಿಯಲ್ಲಿನ ದೇವರ ಮೂರ್ತಿಗಳಂತೆ ಪ್ರತಿಷ್ಟಾಪಿಸಲಾಗಿದ್ದು, ಅವರಿಗೆ ಯಾವುದೇ ತರಹದ ಅಧಿಕಾರವನ್ನು ಕೊಟ್ಟಿಲ್ಲ. ಈ ಬಗ್ಗೆ ನಾನು ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದೇನೆ ಎಂದು ಹೇಳಿದ್ದಾರೆ.
ಇತ್ತ ರಾಹುಲ್ ಗಾಂಧಿ ಹೇಳಿಕೆಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರು ರಾಹುಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನವರು ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ಗೆ ವೀಸಾ ನಿರಾಕರಣೆ; ಚೀನಾ ಪ್ರವಾಸ ರದ್ದು ಮಾಡಿದ ಅನುರಾಗ್ ಠಾಕೂರ್
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಬಿಜೆಪಿ ನಾಯಕ ಮುರಳೀಧರ್ ರಾವ್, ಕಾಂಗ್ರೆಸ್ನ ಹಿಂದೂ ವಿರೋಧಿ ನಿಲುವು ರಾಹುಲ್ ಗಾಂಧಿ ಮೂಲಕ ಈಗ ಮತ್ತೊಮ್ಮೆ ಬಯಲಾಗಿದೆ. ಗರ್ಭಗುಡಿಯಲ್ಲಿನ ಮೂರ್ತಿಗಳನ್ನು ಇವರು ಅಶಕ್ತ ಎಂದು ಭಾವಿಸಿದ್ದರೆ ರಾಹುಲ್ ಗಾಂಧಿ ಏಕೆ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇದಕ್ಕಿಂತ ಹೆಚ್ಚು ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂಗಳ ಭಾವೆನೆಗೆ ಧಕ್ಕೆ ಉಂಟು ಮಾಡುವುದು ಕಾಂಗ್ರೆಸ್ನವರಿಗೆಹೊಸ ವಿಚಾರ ಏನಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಕಾರ್ಯದರ್ಶಿ ರಮೇಶ್ ನಾಯ್ಡು ನಾಗೋತು ಮೊದಲಿಗೆ ತಮಿಳುನಾಡು ಮೂಲಕ ಪಪ್ಪು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ. ಈಗ ಇಟಲಿ ಮೂಲದ ಪಪ್ಪು ಹಿಂದೂ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾನೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಮಾತನಾಡುವವವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.