ಮೈಸೂರು: ಮಹಿಷ ದಸರಾ ಹೆಸರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ಅಪಮಾನ ಮಾಡುವ ಕಾರಣಕ್ಕೆ ನಾನು ಮಹಿಷ ದಸರಾವನ್ನು ವಿರೋಧ ಮಾಡುತ್ತಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಫೇಸ್ಬುಕ್ ಲೈವ್ನಲ್ಲಿ ಮಹಿಷ ದಸರಾ ಆಚರಣೆ ಮಾಡುವವರ ವಿರುದ್ಧ ಹರಿಹಾಯ್ದ ಸಂಸದ ಪ್ರತಾಪ್ ಸಿಂಹ, ಬೆಟ್ಟಕ್ಕೆ ಬಂದು ಮಹಿಷಾ ಒಳ್ಳೆಯವನು ಎಂದಷ್ಟೆ ಹೇಳಿ ಹೋಗುವುದಿಲ್ಲ. ಚಾಮುಂಡಿಗೆ ರವಿಕೆ ಹಾಕುವವನು ಗಂಡಸು, ಸೀರೆ ಉಡಿಸುವವನು ಗಂಡಸು ಎಂದು ಕೆಟ್ಟದಾಗಿ ಮಾತನಾಡುತ್ತಾರೆ. ನಿಮ್ಮ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾರಾದರೂ ಒಪ್ಪಿಕೊಳ್ಳುತ್ತೀರಾ? ಮಹಿಷನನ್ನು ಒಳ್ಳೆಯವನೆಂದು ಬಿಂಬಿಸಲು ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಂತಹವರನ್ನು ತಡೆಯಲು ನಾನು ವಿರೋಧ ಮಾಡುತ್ತಿದ್ದೇನೆಂದು ತಿಳಿಸಿದರು.
ಚಾಮುಂಡೇಶ್ವರಿಗೆ ಹೋಗಿ ಬೇಡಿಕೊಳ್ಳುವ ಪ್ರತಿಯೊಬ್ಬರು ಮಹಿಷ ದಸರಾಗೆ ವಿರೋಧ ಮಾಡಬೇಕು. ಇಲ್ಲದಿದ್ದರೆ ತಾಯಿ ಚಾಮುಂಡಿ ಮುಂದೆ ಬೇಡಿಕೊಳ್ಳಲು ನಿಮಗೆ ಯಾವ ನೈತಿಕ ಹಕ್ಕು ಇರುವುದಿಲ್ಲ. ನನ್ನನ್ನು ದಲಿತ ವಿರೋಧಿ ಅಂತ ಹೇಳ್ತಾರೆ. ವಿಚಾರ ಇಲ್ಲದಾಗ ಈ ರೀತಿ ಉಗುಳುತ್ತಾರೆ. ಮಹಿಷನ ಬಗ್ಗೆ ಯಾವುದೇ ದಾಖಲೆ ಇಲ್ಲ. ಈಗ ದಲಿತ ಅಂತ ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಅಶೋಕ ಪುರಂನ ಪ್ರತಿಯೊಬ್ಬರ ಮನೆಯಲ್ಲಿರುವುದು ಚಾಮುಂಡೇಶ್ವರಿ ದೇವಿ ಫೋಟೋ ಹೊರತೋ ಮಹಿಷಾನ ಪೋಟೋ ಅಲ್ಲ. ದಲಿತರೇ ಚಾಮುಂಡಿ ಹಬ್ಬವನ್ನು ಹೆಚ್ಚಾಗಿ ಆಚರಣೆ ಮಾಡುತ್ತಾರೆ. ಈಗ ರಾಜಕೀಯಕ್ಕೆ ದಲಿತ ವಿರೋಧಿ ಎನ್ನುತ್ತಾರೆ. ಮಹಿಷ ಯಾವಾಗ ದಲಿತನಾದ? ಮಹಿಷ ಬೌದ್ಧ ಬಿಕ್ಕು ಆಗಿದ್ದ ಅಂತ ಹೇಳ್ತಾರೆ. ತಾಯಿ ಚಾಮುಂಡಿ ಉಲ್ಲೇಖ ಬರುವುದು ಕೃತ ಯುಗದಲ್ಲಿ. ಆದರೆ, ಬುದ್ಧ ಬಂದಿದ್ದು ಕಲಿಯುಗದಲ್ಲಿ. ಅಶೋಕ ಇದ್ದಿದ್ದು ಕ್ರಿ.ಪೂ 3 ನೇ ಶತಮಾನದಲ್ಲಿ. ಇವರು ಹೇಳುವ ವಿಚಾರ ಸಮಯಕ್ಕೆ ತಾಳಮೇಳವೇ ಇಲ್ಲ. ಇದೆಲ್ಲ ಕಪೋಲ ಕಲ್ಪಿತ ವಿಚಾರಗಳು ಎಂದು ಪ್ರತಾಪ್ ಸಿಂಹ ಹೇಳಿದರು.
ಹಿಂದೂ ಧರ್ಮ ಒಡೆಯುವ ಪ್ರಯತ್ನಕ್ಕೆ ಇದೆಲ್ಲ ಮಾಡ್ತಿದ್ದಾರೆ. ಕೆಲವರು ನನ್ನ ಬಗ್ಗೆ ವಿರೋಧ ಮಾಡ್ತಿದ್ದಾರೆ. ಇದೆಲ್ಲವೂ ವೈಯಕ್ತಿಕ ಲಾಭ-ನಷ್ಟದಿಂದ ಆಗಿರುವಂಥದ್ದು. ನಿಜವಾದ ದಲಿತ ವಿರೋಧಿಗಳು ನೀವುಗಳು. ಬಿ.ಟಿ. ಲಲಿತ ನಾಯಕ್ರಿಂದ ಉದ್ಘಾಟನೆ ಮಾಡಿಸಲು ಮುಂದಾಗಿದ್ದೀರಿ. ಆಕೆಯ ಪುತ್ರ ಅಂಬೇಡ್ಕರ್ ಪುತ್ಥಳಿಗೆ ಮದ್ಯ ಕುಡಿಸಿದ್ದ. ನೀವು ಅಂಬೇಡ್ಕರ್ ವಾದಿಗಳು ಅಂತಿರಾ ಆದ್ರೆ ಅಂಬೇಡ್ಕರ್ ಪುತ್ಥಳಿಗೆ ಎಂಡ ಕುಡಿಸಿದ ತಾಯಿಯಿಂದ ಉದ್ಘಾಟನೆ ಮಾಡಿಸುತ್ತಿದ್ದೀರಿ ಎಂದು ಟೀಕಿಸಿದರು.
ಸುಮ್ಮನೆ ನನ್ನನ್ನು ದಲಿತ ವಿರೋಧಿ ಅಂತ ಹೇಳೋದು ಬೇಡ. ಮೈಸೂರಿಗರ ಹತ್ತಿರ ಹೋರಾಟದ ಗುಣ ಇಲ್ಲ ಅಂತ ಅಂದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿಯೇ ಮಹಿಷ ಪೋಟೋ ಇಟ್ಟುಕೊಳ್ಳೊಕೆ ಬಿಡ್ತಾರಾ? ನಿಮ್ಮ ಮನೆಯಲ್ಲಿ ಬೇಕಾದರೆ ಮಹಿಷ ದಸರಾ ಮಾಡಿಕೊಳ್ಳಿ. ಬೆಟ್ಟಕ್ಕೆ ಹೋಗಿ ಚಾಮುಂಡಿ ದೇವಿಗೆ ಅಪಮಾನ ಮಾಡಬೇಕು ಅಂತನಾ ನೀವು ಅಲ್ಲಿ ಹೋಗೋದು? ಕೆಲವರಿಗೆ ಅರ್ಥವಾಗಬೇಕು ಅಂತ ನಿಮ್ಮ ಭಾಷೆಯಲ್ಲಿ ಹೇಳುತ್ತಿದ್ದೇನೆ. ಇಂಥವರನ್ನು ಈಗಗಲೇ ವಿರೋಧಿಸದಿದ್ದರೆ ಮುಂದೆ ಇಸ್ರೆಲ್ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.