ಶಿಕಾರಿಪುರ: ಶ್ರೀಸಾಮಾನ್ಯನ ಬದುಕು ಸಂತೃಪ್ತವಾಗಬೇಕು. ಎಲ್ಲರ ಮೊಗದಲ್ಲಿ ಮಂದಹಾಸ ಮೂಡಬೇಕು. ಅಂತ್ಯೋದಯ ಪರಿಕಲ್ಪನೆ ಅದ್ಭುತವಾಗಿದೆ. ಹಸಿವು ನೀಗಿಸುವುದು ಶ್ರೇಷ್ಠ ಕಾರ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶುಕ್ರವಾರ ತಾಲೂಕಿನ ಶಿರಾಳಕೊಪ್ಪ ಪುರಸಭೆ ಮುಂಭಾಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತ್ ಅಕ್ಕಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಎಲ್ಲ ವರ್ಗಗಳ ಜನರಿಗೆ ಅತಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಅಕ್ಕಿ ವಿತರಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ಮೋದಿ ಅವರ ಸಾಮಾಜಿಕ ಕಳಕಳಿಯ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ ಎಂದರು. ಜಾಗತಿಕ ಮಟ್ಟದ ಏರುಪೇರಿನಿಂದ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿದ್ದ ಜನಸಾಮಾನ್ಯರ ಕಷ್ಟ ನೀಗಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಕೆ.ಜಿ.ಗೆ 29 ರೂ.ನಂತೆ ಜನಸಾಮಾನ್ಯರಿಗೆ ಅಕ್ಕಿ ಲಭಿಸಲಿದೆ ಎಂದು ಹೇಳಿದರು. ಪ್ರಮುಖರಾದ ಕೊಳಗಿ ರೇವಣಪ್ಪ, ಸಣ್ಣ ಹನುಮಂತಪ್ಪ, ಮಂಜಪ್ಪ, ಚಂದ್ರಶೇಖರ, ಇಂದುಧರ, ಸುಬ್ರಹ್ಮಣ್ಯ, ಗ್ರಾಪಂ ಅಧ್ಯಕ್ಷ ನಿರಂಜನ, ರಾಘವೇಂದ್ರ ಇತರರಿದ್ದರು.