ನವದೆಹಲಿ: ಈ ವರ್ಷ ಮುಂಗಾರು ಮಳೆ ವಾಡಿಕೆಯಂತೆ ಇರಲಿದ್ದು, ನೈಋತ್ಯ ಮಾರುತವು ಜೂನ್ ಮೊದಲ ವಾರದಲ್ಲಿ ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಜೂನ್ನಿಂದ ನಾಲ್ಕು ತಿಂಗಳ ಮುಂಗಾರು ಅವಧಿಯ ಮುನ್ಸೂಚನೆ ನೀಡಿರುವ ಐಎಂಡಿ, ದೀರ್ಘ ಕಾಲದ ಸರಾಸರಿ ಮಳೆ ಶೇ. 100 ಸುರಿಯಲಿದೆ (ಶೇ. 5 ಆಚೀಚೆ). ಶೇ. 96ರಿಂದ ಶೇ. 104ರವರೆಗಿನ ಮಳೆಯನ್ನು ಸಾಧಾರಣ ಅಥವಾ ವಾಡಿಕೆ ಮಳೆ ಎಂದು ವರ್ಗೀಕರಿಸಲಾಗಿದೆ. ಭಾರತದಲ್ಲಿ ಮುಂಗಾರು ಅವಧಿಯ ಐವತ್ತು ವರ್ಷ ಅಥವಾ ದೀರ್ಘ ಕಾಲದ ಸರಾಸರಿ ಮಳೆ ಪ್ರಮಾಣ ಶೇ. 89 ಇದೆ ಎಂದು ಐಎಂಡಿ ಮುಖ್ಯಸ್ಥ ಎಂ.ಮಹಾಪಾತ್ರ ತಿಳಿಸಿದ್ದಾರೆ.
ಗ್ರಾಮೀಣ ಭಾರತವು ಮುಂಗಾರನ್ನೇ ಆಶ್ರಯಿಸಿದೆ ಮತ್ತು ನೈಋತ್ಯ ಮಾರುತವು ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ. ಮುಂಗಾರು ಹಂಗಾಮಿನ 4 ತಿಂಗಳ ಅವಧಿಯಲ್ಲಿ ಇಡೀ ವರ್ಷದಲ್ಲಿ ಸುರಿಯುವ ಮಳೆಯ ಶೇ.75 ಮಳೆ ಬೀಳುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್ ರಾಜೀವನ್ ಹೇಳಿದ್ದಾರೆ.
ನೈಋತ್ಯ ಮಾರುತ ಸೆಪ್ಟೆಂಬರ್ ಹೊತ್ತಿಗೆ ರಾಜಸ್ಥಾನದ ಮೂಲಕ ನಿರ್ಗಮಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮತ್ತೊಂದೆಡೆ ಐಎಂಡಿ ದೇಶದಲ್ಲಿ ಮುಂಗಾರು ಆರಂಭವಾಗುವ ಮತ್ತು ಅಂತ್ಯಗೊಳ್ಳುವ ದಿನಾಂಕಗಳನ್ನೂ ಪರಿಷ್ಕರಿಸಲಿದೆ ಎಂದು ರಾಜೀವನ್ ತಿಳಿಸಿದ್ದಾರೆ.
ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿತ್ತು
ಬೆಂಗಳೂರು: ರಾಜ್ಯಕ್ಕೆ ಜೂನ್ ಮೊದಲ ವಾರ ಮುಂಗಾರು ಪ್ರವೇಶಿಸಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮೂನ್ಸೂಚನೆ ನೀಡಿದೆ. ಜೂನ್1ರಂದು ಕೇರಳ ಪ್ರವೇಶಿಸಲಿರುವ ಮಾನ್ಸೂನ್ ಈ ಸಂದರ್ಭದಲ್ಲಿ ಮುಂಗಾರು ಮಾರುತಗಳ ಹೆಚ್ಚು ಪ್ರಬಲವಾಗಿದ್ದರೆ ಅದೇ ದಿನವೇ ರಾಜ್ಯಕ್ಕೂ ಪ್ರವೇಶಿಸಲಿದೆ ಎಂದಿದೆ. ರಾಜ್ಯದಲ್ಲಿ ಕಳೆದ ವರ್ಷ ವಾಡಿಕೆಗಿಂತ ಶೇ.23 ಹೆಚ್ಚು ಮಳೆಯಾಗಿತ್ತು. ಬೇಸಿಗೆಗಾಲದಲ್ಲಿ ಬೆಳೆ ಬೆಳೆದು ಕರೊನಾನಿಂದ ಮಾರುಕಟ್ಟೆಗೆ ಉತ್ಪನ್ನಗಳನ್ನು ಸಾಗಿಸಲಾಗದೆ ಕಷ್ಟಪಡುತ್ತಿರುವ ರೈತರಿಗೆ ಭಾರತೀಯ ಹವಾಮಾನ ಇಲಾಖೆ ನೀಡಿರುವ ವರದಿ ಸಂತಸ ತಂದಿದೆ.
ಕರೊನಾ ವೈರಸ್ನಿಂದ ನೀವೆಷ್ಟು ಸುರಕ್ಷಿತ ಎಂದು ತಿಳಿಸುವ ಆರೋಗ್ಯ ಸೇತು ಆಪ್ನಿಂದ ಹೊಸ ದಾಖಲೆ