ಕೊಚ್ಚಿನ್: ಈಗಾಗಲೇ ಎಡಬಿಡದೇ ಸುರಿಯುತ್ತಿರುವ ಅಕಾಲಿಕ ಮಳೆ ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದ್ದು, ಇದರ ಬೆನ್ನಲ್ಲೇ ಮುಂಗಾರು ಪ್ರವೇಶಿಸಲಿದ್ದು, ಮುಂದಿನ ವಾರದಿಂದ ಮತ್ತಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾನ್ಸೂನ್ ಪ್ರವೇಶಕ್ಕೂ ಮುನ್ನ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಜನರು ಸಂಕಷ್ಟಕ್ಕೀಡಾಗಿದ್ದು, ಈ ಬಾರಿ ಅವಧಿಗೂ ಮುನ್ನ ಪ್ರವೇಶಿಸುತ್ತಿರುವ ಮಾನ್ಸೂನ್ ಮಾರುತಗಳು ಭಾರೀ ಮಳೆ ಸುರಿಸುವ ಸಾಧ್ಯತೆ ಇದೆ.
ಇನ್ನು ಕರಾವಳಿ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನೇ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಮೂರು ದಿನ ಮೊದಲೇ ಮಾನ್ಸೂನ್ ಮಳೆಯಾಗಲಿದ್ದು, ಪ್ರತಿ ವರ್ಷ ಜೂನ್ 1 ರಂದು ಪ್ರವೇಶಿಸುತ್ತಿದ್ದ ಮಾರುತಗಳು ಈ ಬಾರಿ ಮೇ 27ರಂದೇ ಪ್ರವೇಶಿಸುತ್ತಿವೆ.
ಕೇರಳಕ್ಕೆ ತಲುಪುತ್ತಿದ್ದಂತೆ ಭಾರೀ ಮಳೆ ಸುರಿಸಲಿರುವ ಮಾನ್ಸೂನ್ ಮಳೆ ಕರ್ನಾಟಕಕ್ಕೆ ಬರುತ್ತಿದ್ದಂತೆ ಮಳೆ ಪ್ರಮಾಣ ತಗ್ಗಿಸುವ ಸಾಧ್ಯತೆ ಇದೆ. ಹಾಗಾಗಿ ಭಾರೀ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಿದೆ.
ಮಾನ್ಸೂನ್ ಮಳೆ ಈ ಬಾರಿಯೂ ಉತ್ತಮ ಮಳೆಯಾಗಲಿದ್ದು, ದೇಶಾದ್ಯಂತ ಮಳೆ ಕೊರತೆ ಕಾಡುವುದಿಲ್ಲ. ಸದ್ಯ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ಮಾತ್ರ ಬಿಸಿಗಾಳಿ ಬೀಸುತ್ತಿದ್ದು, ಗರಿಷ್ಠ 45 ಡಿಗ್ರಿ ತಾಪಮಾನವಿದೆ. ಮುಂದಿನ ವಾರದಿಂದ ಇದು ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್)
ಕೆನಡಾ ಸಂಸತ್ನಲ್ಲಿ ಕನ್ನಡದ ಕಂಪು: ಕುವೆಂಪು ಅವರ ಗೀತೆ ಹಾಡಿದ ಸಂಸದನ ವಿಡಿಯೋ ವೈರಲ್