ಮೊಳಕಾಲ್ಮೂರು: ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಗಳಿಗೆ ಡೊನೇಷನ್ ಕಟ್ಟುವ ಬದಲು ಸರ್ಕಾರಿ ಶಾಲೆಗಳಿಗೆ ದಾನ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಓಬಣ್ಣ ಹೇಳಿದರು.
ತಾಲೂಕಿನ ಕೊಮ್ಮನಪಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ 54 ಎಸ್ಡಿಎಂಸಿ ಸಮಿತಿ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಕ ಗಳಿಕೆಗೆ ಪೈಪೋಟಿಗೆ ಬಿದ್ದು ಖಾಸಗಿ ಶಾಲೆಗಳ ಮೊರೆ ಹೋಗುವ ಬದಲು ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡುವುದು ಉತ್ತಮ. ಇದರಿಂದ ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಶಿಕ್ಷಣ ಸಿಗಲು ಸಾಧ್ಯ ಎಂದರು.
ಸಿಆರ್ಪಿ ಓಂಕಾರಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಸರ್ಕಾರ ಹಲವು ಯೋಜನೆಗಳ ಮೂಲಕ ಸೌಲಭ್ಯ ಕಲ್ಪಿಸುತ್ತಿದೆ. ಅವುಗಳ ಉಪಯೋಗ ಪಡೆದು ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಒಂದು ಶಾಲೆ ಎಂದರೆ ಸಾಕ್ಷರತೆ ಸಮಾಜ ಕಟ್ಟುವ ಜ್ಞಾನ ದೇಗುಲವಿದ್ದಂತೆ. ಜಾತ್ರೆ, ಉತ್ಸವವೆಂದು ಹಣ ಖರ್ಚು ಮಾಡುವ ಪದ್ಧತಿ ನಿಲ್ಲಬೇಕು. ಎಸ್ಡಿಎಂಸಿ ಸಮಿತಿ ಪದಾಧಿಕಾರಿಗಳ ಜವಾಬ್ದಾರಿ ದೊಡ್ಡದಿದೆ. ಗ್ರಾಮದ ಮುಖಂಡರ ಸಹಕಾರ ಪಡೆದು ಶಾಲೆಗಳ ಪ್ರಗತಿಗೆ ಶ್ರಮಿಸಬೇಕು ಎಂದರು.
ಮುಖ್ಯಶಿಕ್ಷಕರಾದ ಎಸ್.ಬೋರಮ್ಮ, ಪಿ.ಶಿವರುದ್ರಪ್ಪ, ಎಂ.ತೇಜುಮೂರ್ತಿ, ಎಸ್ಡಿಎಂಸಿ ಅಧ್ಯಕ್ಷರಾದ ಗೋವಿಂದಪ್ಪ, ವಿಶ್ವನಾಥ್, ಉಪಾಧ್ಯಕ್ಷೆ ತುಪ್ಪದಮ್ಮ, ಚಿತ್ತಯ್ಯ ಇದ್ದರು.