ಕೆ.ಕೆಂಚಪ್ಪ ಮೊಳಕಾಲ್ಮೂರು: 150 ‘ಎ’ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಂಪುರ, ದಿನದಿಂದ ದಿನಕ್ಕೆ ಬೆಳೆಯುತ್ತಿದೆಯೇ ಹೊರತು ಅಗತ್ಯ ಸೌಕರ್ಯ ಮಾತ್ರ ದಕ್ಕುತ್ತಿಲ್ಲ.
ಜಿಲ್ಲೆಯ ಗಡಿ ಅಂಚಿನಲ್ಲಿರುವ ರಾಂಪುರ ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾಗಿದೆ. ಕೂಡ್ಲಿಗಿ, ಬಳ್ಳಾರಿ, ಆಂಧ್ರದ ರಾಯದುರ್ಗದಂತಹ ಮಹಾ ನಗರಗಳಲ್ಲದೆ ಸುತ್ತಮುತ್ತಲ 50ಕ್ಕೂ ಹೆಚ್ಚು ಗ್ರಾಮಗಳ ಕೇಂದ್ರ ಸ್ಥಾನವಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಬೆಳವಣಿಗೆಗೆ ಹಲವು ಅವಕಾಶಗಳಿದ್ದರೂ ಗ್ರಾಮಕ್ಕೆ ಅಗತ್ಯ ಒದಗಿಸದಿರುವುದು ವಿಷಾದಕರ ಸಂಗತಿಯಾಗಿದೆ.
ಗ್ರಾಮದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರಾಥಮಿಕ ಶಿಕ್ಷಣ ಮಾತ್ರ ದೊರೆಯುತ್ತಿದ್ದು, ಇದರ ಅನುಕೂಲವನ್ನು 5 ಸಾವಿರಕ್ಕೂ ಅಧಿಕ ಮಕ್ಕಳು ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ಶಿಕ್ಷಣ ಪಡೆಯಲು ದೂರದ ಬಳ್ಳಾರಿ, ಮೊಳಕಾಲ್ಮೂರು ಇನ್ನಿತರ ನಗರ ಪಟ್ಟಣಗಳಿಗೆ ತೆರಳಿ ಖಾಸಗಿ ಶಿಕ್ಷಣ ಸಂಸ್ಥೆ ಸೇರಬೇಕಿದೆ.
ಹೀಗಾಗಿ ಇಲ್ಲಿ ಸರ್ಕಾರಿ ಪ್ರೌಢಶಾಲೆ, ಪಿಯುಸಿ, ಪದವಿ ಮತ್ತು ತಾಂತ್ರಿಕ ಶಿಕ್ಷಣ ಕೇಂದ್ರ ತೆರೆದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಂಬೋಣ.
ಈ ಭಾಗದಲ್ಲಿ ಬಹುತೇಕ ಎಸಿ-ಎಸ್ಟಿ ಹಾಗೂ ಕೂಲಿ ಕಾರ್ಮಿಕ ವರ್ಗವೇ ಹೆಚ್ಚಿದೆ. ಪ್ರಾಥಮಿಕ ಶಿಕ್ಷಣ ಮುಗಿಸಿ ಖಾಸಗಿ ಶಾಲಾ ಕಾಲೇಜುಗಳಿಗೆ ಶುಲ್ಕ ಪಾವತಿಸಲಾಗದೆ ಅನೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಕುರಿತು ಪ್ರಗತಿಪರ ಸಂಘಟನೆಗಳು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ನಾಗರಿಕರ ಆರೋಪ.