ಮೊಳಕಾಲ್ಮೂರು: ಅನಕ್ಷರಸ್ಥರಿಗೆ ಅಕ್ಷರದ ಅರಿವು, ಉದ್ಯೋಗ ಕೊಡಿಸುವುದಲ್ಲದೆ 4135 ಅಂಗವಿಕಲರಿಗೆ 94 ಲಕ್ಷ ರೂ. ಮೌಲ್ಯದ ಸಾಧನ ಸಲಕರಣೆ ನೀಡಿ ಅವರ ಬದುಕು ಬಂಗಾರವಾಗಲು ಧರ್ಮಸ್ಥಳ ಸಂಸ್ಥೆ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ತಿಳಿಸಿದರು.
ಇಲ್ಲಿನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಚೇರಿಯಲ್ಲಿ ಬುಧವಾರ ಜನ ಮಂಗಲ ಯೋಜನೆಯಡಿ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಿಸಿ ಮಾತನಾಡಿದರು.
ಸಂಸ್ಥೆಯು ರಾಜ್ಯದ 13 ಸಾವಿರ ನಿರ್ಗತಿಕರಿಗೆ ಮಾಸಾಶನ, 12 ಸಾವಿರ ಬಡ ಮಕ್ಕಳಿಗೆ ಶಿಷ್ಯವೇತನ ಕೊಡಿಸುವ ಜತೆಗೆ ದೇವಸ್ಥಾನ, ಶ್ರದ್ಧಾಕೇಂದ್ರ, ಕೆರೆಗಳ ಪುನಶ್ಚೇತನಕ್ಕೆ ಒತ್ತುಕೊಟ್ಟಿದೆ. ಸಾಮಾಜಿಕ, ಧಾರ್ಮಿಕ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವಂತಹ ಹಲವಾರು ಕಾರ್ಯಕ್ರಮ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.
ಸಂಸ್ಥೆಯ ಕೊರಗಪ್ಪ ಪೂಜಾರಿ, ಜನ ಜಾಗೃತಿ ವೇದಿಕೆ ಸದಸ್ಯರಾದ ತಿಪ್ಪೇಸ್ವಾಮಿ, ಶೇಖರ್, ವಕೀಲೆ ಎಂ.ಎನ್.ವಿಜಯಲಕ್ಷ್ಮಿ, ಮೇಲ್ವಿಚಾರಕರಾದ ಈ.ದೇವೀರಮ್ಮ, ಲಕ್ಷ್ಮೀದೇವಿ ಹಾಗೂ ಅಂಗವಿಕಲರಿದ್ದರು.