ಮೊಳಕಾಲ್ಮೂರು: ಅಸಂಘಟಿತ ಕಾರ್ಮಿಕರ ಬದುಕನ್ನು ಹಸನುಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಕಾನೂನು ಇಲಾಖೆ ಬದ್ಧವಾಗಿದೆ ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ಹೇಳಿದರು.
ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸಿಎಸ್ಪಿ ಯೋಜನೆಯಡಿ ಇಲ್ಲಿನ ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಮತ್ತು ಕಾನೂನು, ಕಾಯ್ದೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗ್ರಾಮೀಣ ಜನರು ಇವುಗಳ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದರು.
ತೊಟ್ಟಿಲು ತೂಗುವ ಕೈಗಳು ಮನೆಯ ನಿರ್ವಹಣೆಯಲ್ಲಿ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತವೆ. ಮಹಿಳೆಯಲ್ಲಿರುವ ತಾಳ್ಮೆ, ಸಹನೆ ಉತ್ತಮ ಜೀವನಕ್ಕೆ ದಾರಿಯಾಗಿವೆ ಎಂದು ತಿಳಿಸಿದರು.
ವಕೀಲ ರಾಜಶೇಖರನಾಯಕ ಮಾತನಾಡಿ, ಮನುಷ್ಯ ದೈನಂದಿನ ಜೀವನದಲ್ಲಿ ಹಸ್ನುಖಿಯಾಗಿ ಬೆಳೆಯಲು ಮೂಲ ಹಕ್ಕು ಮತ್ತು ಕರ್ತವ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ವಕೀಲರಾದ ವಿ.ಡಿ.ರಾಘವೇಂದ, ಕೆ.ಎಂ.ರಾಮಾಂಜನೇಯ, ಕಾರ್ಮಿಕ ನಿರೀಕ್ಷಕ ಶೇಖ್ ಶಫೀವುಲ್ಲಾ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಪಿ.ಪಾಪಯ್ಯ, ಕಾರ್ಯದರ್ಶಿ ಜಿ.ಮಂಜುನಾಥ, ಸಹ ಕಾರ್ಯದರ್ಶಿ ಕುಮಾರಪ್ಪ, ಸಿಡಿಪಿಒ ಸವಿತಾ, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಕೊರಗಪ್ಪ ಪೂಜಾರ್, ವಕೀಲರಾದ ಅನಂತಮೂರ್ತಿ, ಎಂ.ಎನ್.ವಿಜಯಲಕ್ಷ್ಮಿ, ವಿ.ಸುರೇಶ್, ವಾರ್ಡನ್ ಹಾಲೇಶ್ ಇದ್ದರು.