ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿಗೆ 2019 ಅನೇಕ ರೀತಿಯಲ್ಲಿ ಅದೃಷ್ಟದ ವರ್ಷ. ಏಪ್ರಿಲ್-ಮೇನಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (303) ಪ್ರಚಂಡ ಗೆಲುವು ಸಾಧಿಸುವ ಮೂಲಕ (ಎನ್ಡಿಎ ಒಟ್ಟು ಬಲ 353) ಮೋದಿ ಮೇ 30ರಂದು ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್, ರ್ಕಿಗಿಸ್ತಾನ, ಮಾರಿಷಸ್, ಮ್ಯಾನ್ಮಾರ್, ಥಾಯ್ಲೆಂಡ್ (ಬಿಮ್ಸ್ಟೆಕ್) ರಾಷ್ಟ್ರಗಳ ಮುಖ್ಯಸ್ಥರು ಸೇರಿ 8 ಸಾವಿರಕ್ಕೂ ಹೆಚ್ಚು ಮಂದಿ ರಾಷ್ಟ್ರಪತಿ ಭವನದ ಹೊರ ಆವರಣದಲ್ಲಿ ಪ್ರಮಾಣ ವಚನದ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ಮೂಲಕ ಭಾರತದ ಪ್ರಾದೇಶಿಕದ ಬಲವನ್ನು ಮೋದಿ ಜಗತ್ತಿಗೆ ಸಾರಿದರು. (ಮೊದಲ ಅವಧಿಯಲ್ಲಿ ಸಾರ್ಕ್ ರಾಷ್ಟ್ರಗಳ ಪ್ರಮುಖರು ಪ್ರಮಾಣ ವಚನದಲ್ಲಿ ಪಾಲ್ಗೊಂಡಿದ್ದರು) ಅಲ್ಲಿಂದೀಚೆಗೆ ಮೋದಿ ಮತ್ತು ಅವರ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಯ ಸಿಂಹಾವಲೋಕನ ಇಲ್ಲಿದೆ.
ಮುಖ್ಯಾಂಶ
ಜಲಸಂಪನ್ಮೂಲ, ನೀರಾವರಿ ಮತ್ತು ಗಂಗಾ ನದಿ ಶುದ್ಧೀಕರಣ ಮೂರೂ ಸೇರಿಸಿ ಹೊಸದಾಗಿ ಜಲ ಶಕ್ತಿ ಸಚಿವಾಲಯ ರಚನೆ.
ದೇಶದ ಮೊದಲ ಪೂರ್ಣಾವಧಿ ಮಹಿಳಾ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ರಿಂದ ಜುಲೈ 5ರಂದು 2020-21ರ ಪೂರ್ಣಾವಧಿ ಬಜೆಟ್ ಮಂಡನೆ.
ಮೋದಿ ನಂಬರ್ 1: ಫೆಬ್ರವರಿಯಲ್ಲಿ ಕರೊನಾ ಸೋಂಕು ಭಾರತಕ್ಕೆ ಕಾಲಿಟ್ಟಿತು. ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಜನಸಂಖ್ಯೆಯ ದೇಶವಾದ ಭಾರತದಲ್ಲಿ ಇದರ ನಿಯಂತ್ರಣ ಸುಲಭದ ಕೆಲಸವಲ್ಲ. ಇದರ ವಿರುದ್ಧದ ಹೋರಾಟವನ್ನು ಬಹುಎಚ್ಚರಿಕೆ ಮತ್ತು ಜಾಣ್ಮೆಯಿಂದ ಮೋದಿ ಆರಂಭಿಸಿದರು. ಈ ಹೋರಾಟಕ್ಕೆ ಕೈಗೊಂಡ ಕ್ರಮಗಳು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿ ಮೆಚ್ಚುಗೆಗೆ ಪಾತ್ರವಾಯಿತು. ಕರೊನಾ ಹತೋಟಿಗೆ ಕೈಗೊಂಡ ಕ್ರಮಗಳ ಬಗ್ಗೆ ನಡೆದ ದೇಶ-ವಿದೇಶಗಳ ವಿವಿಧ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ನಂ.1 ಆಗಿ ಹೊರಹೊಮ್ಮಿದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಅತಿಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿರುವ ನಾಯಕರಾಗಿದ್ದಾರೆ.
ಇದನ್ನೂ ಓದಿ: 2ನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ: ದೇಶದ ಜನರಿಗೆ ಮೋದಿ ಭಾವನಾತ್ಮಕ ಪತ್ರ
370ನೇ ವಿಧಿ ರದ್ದು
ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮತ್ತು 35ಎ ವಿಧಿ ಅನ್ವಯ ಜಮ್ಮು- ಕಾಶ್ಮೀರ ವಿಧಾನಸಭೆಗೆ ಇದ್ದ ರಾಜ್ಯದ ಕಾಯಂ ನಿವಾಸಿಗಳನ್ನು ಗುರುತಿಸುವ ಅಧಿಕಾರವನ್ನೂ ರದ್ದು ಪಡಿಸುವ ನಿರ್ಧಾರವನ್ನು ಆ.5ರ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು. ಇದರ ಬೆನ್ನಿಗೆ ಜಮ್ಮು-ಕಾಶ್ಮೀರ ಪುನರ್ ವಿಂಗಡನೆ ಮಸೂದೆಯನ್ನು ಗೃಹ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಮಂಡಿಸಿದರು. ಮರುದಿನ ಈ ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದು ಆ. 9ರಂದು ರಾಷ್ಟ್ರಪತಿ ಅಂಕಿತದೊಂದಿಗೆ ಕಾಯ್ದೆಯಾಯಿತು. ಇದರ ಅನ್ವಯ ಜಮ್ಮು- ಕಾಶ್ಮೀರ (ಶಾಸನಸಭೆ ಸಹಿತ) ಮತ್ತು ಲಡಾಖ್ (ಶಾಸನಸಭೆ ರಹಿತ) ಕೇಂದ್ರಾಡಳಿತ ಪ್ರದೇಶಗಳಾಗಿ ಅ.31ರಿಂದ ಅಸ್ತಿತ್ವ ಪಡೆದವು. ಜಮ್ಮು-ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 107ಕ್ಕೆ ಏರಿಸಲಾಯಿತು. ಈ ಪೈಕಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 24 ಕ್ಷೇತ್ರಗಳು ಖಾಲಿ ಇರಲಿವೆ. ಈ ಮೂಲಕ ಬಿಜೆಪಿಯ 3 ದಶಕಗಳ ಪ್ರಣಾಳಿಕೆಯ ಭರವಸೆ ಈಡೇರಿತು.
ಜಿನ್ಪಿಂಗ್ ಜತೆ ಶೃಂಗ
ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮುಗಿಸಿಕೊಂಡು ಬರುತ್ತಿದ್ದಂತೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ತಮಿಳುನಾಡಿನ ಐತಿಹಾಸಿಕ ಮಹಾಬಲಿಪುರಂಗೆ ಅಕ್ಟೋಬರ್ 11 ಮತ್ತು 12ರಂದು ಭೇಟಿ ನೀಡಿದ್ದರು. ಭಾರತ- ಚೀನಾ ಮುಖ್ಯಸ್ಥರ ಅನೌಪಚಾರಿಕ ಶೃಂಗದ ಎರಡನೇ ಚರಣ ಇದಾಗಿತ್ತು. (ಮೊದಲ ಸಭೆ ಚೀನಾದ ವುಹಾನ್ನಲ್ಲಿ 2018 ಏಪ್ರಿಲ್ನಲ್ಲಿ ನಡೆದಿತ್ತು). ಈ ಶೃಂಗದ ಮೂಲಕ ಭಾರತ- ಚೀನಾ ಮಧ್ಯೆ ಅನೇಕ ವೈಮನಸ್ಯಗಳು ದೂರವಾದವು. ವಾಣಿಜ್ಯತ್ಮಕ ಸಂಬಂಧ ಗಟ್ಟಿಗೊಳಿಸಲು ಚೆನ್ನೈ ಕನೆಕ್ಟ್ ಎಂಬ ಘೋಷಣೆ ಮಾಡಲಾಯಿತು.
ಹೌಡಿ ಮೋದಿ ನಮಸ್ತೆ ಟ್ರಂಪ್
ಪ್ರಧಾನಿ ಮೋದಿ ಹ್ಯೂಸ್ಟ್ನ್ನಲ್ಲಿ ಕಳೆದ ಸೆ. 22ರಂದು ನಡೆದ ‘ಹೌಡಿ ಮೋದಿ’ (ಮೋದಿ ಹೇಗಿದ್ದೀರಿ?) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್ಆರ್ಜಿ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ವಿದೇಶಿ ಗಣ್ಯರೊಬ್ಬರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದು ಅಮೆರಿಕದ ಇತಿಹಾಸದಲ್ಲೇ ಮೊದಲು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾಗವಹಿಸಿದ್ದರು. ಅವರ ಕೈಹಿಡಿದ ಮೋದಿ ಕ್ರೀಡಾಂಗಣದ ಸುತ್ತ ಒಂದು ಪ್ರದಕ್ಷಿಣೆ ಹಾಕಿದ್ದು, ಭಾರಿ ಸಂಚಲನ ಮೂಡಿಸಿತು. ಇದಾದ ಐದು ತಿಂಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದರು. ಅಹಮದಾಬಾದ್ನಲ್ಲಿ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೆ.24ರಂದು ನಡೆದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ 1.25 ಲಕ್ಷ ಜನರು ಭಾಗವಹಿಸಿ ಟ್ರಂಪ್ಗೆ ಸ್ವಾಗತ ಕೋರಿದರು. ಇದನ್ನು ಕಂಡು ನಿಬ್ಬೆರಗಾದ ಟ್ರಂಪ್, ಮೋದಿಯವರ ಜನಾಕರ್ಷಕ ವ್ಯಕ್ತಿತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಭೇಟಿಯಿಂದ ಭಾರತ- ಅಮೆರಿಕ ಮಧ್ಯೆ ಇದ್ದ ಸುಂಕ ಹೆಚ್ಚಳದ ಸಮಸ್ಯೆ, ವಾಣಿಜ್ಯ ವಹಿವಾಟು ತಿಳಿಗೊಂಡಿತು.
ಅಯೋಧ್ಯೆ ಪ್ರಕರಣ ಶಾಂತಿಯುತ ಇತ್ಯರ್ಥ
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡದ ಶತಮಾನದ ವಿವಾದವನ್ನು ಸುಪ್ರೀಂಕೋರ್ಟ್ ಕಳೆದ ನ.9ರಂದು ಇತ್ಯರ್ಥಗೊಳಿಸಿತು. ವಿವಾದಿತ 2.77 ಎಕರೆ ಭೂಮಿಯನ್ನು ರಾಮಲಲ್ಲಾಗೆ ನೀಡಲು ಸೂಚಿಸಿದ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ರಾಮಮಂದಿರ ನಿರ್ವಣಕ್ಕೆ 3 ತಿಂಗಳ ಒಳಗೆ ಟ್ರಸ್ಟ್ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಮಸೀದಿ ನಿರ್ವಿುಸಿಕೊಳ್ಳಲು ಸುನ್ನಿ ವಕ್ಪ್ ಮಂಡಳಿಗೆ ಅಯೋಧ್ಯೆಯಲ್ಲಿ ಐದು ಎಕರೆ ಜಾಗ ನೀಡುವಂತೆಯೂ ಆದೇಶಿಸಿತು. ಈ ತೀರ್ಪಿನ ಅನ್ವಯ ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸಿದೆ. ಈ ಟ್ರಸ್ಟ್ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ವಣಕ್ಕೆ ಕಳೆದ ಮಂಗಳವಾರ ಶಿಲಾನ್ಯಾಸ ನೆರವೇರಿಸಿದೆ. ಬಿಜೆಪಿ ಪ್ರಣಾಳಿಕೆ 3 ದಶಕದಿಂದ ಇದ್ದ ಶ್ರೀರಾಮ ಮಂದಿರ ನಿರ್ಮಾಣ ಕೈಗೂಡುವ ಹಂತಕ್ಕೆ ಬಂದಿದೆ.
ದಿಢೀರ್ ತ್ರಿವಳಿ ತಲಾಕ್ಗೆ ತಡೆ
ಬಹುವಿವಾದವನ್ನು ಎಬ್ಬಿಸಿದ ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕು ರಕ್ಷಣೆ) ಮಸೂದೆಗೆ (ತ್ರಿವಳಿ ತಲಾಕ್ ತಡೆ) 17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲೇ ಅನುಮೋದನೆ ಪಡೆಯಲಾಯಿತು. ಇದು 2018ರ ಸೆಪ್ಟೆಂಬರ್ 19ರಿಂದಲೇ ಪೂರ್ವನ್ವಯವೂ ಆಗಿದೆ. ಈ ಮೂಲಕ ಮುಸ್ಲಿಂ ಸಮುದಾಯದಲ್ಲಿದ್ದ ಅನಿಷ್ಟ ಪದ್ಧತಿ ನಿವಾರಣೆಗೆ ಕೇಂದ್ರ ಸರ್ಕಾರ ಬಿಗಿ ಕ್ರಮ ಕೈಗೊಂಡಿತು. ಒಮ್ಮೆಲೆ ಮೂರು ಬಾರಿ ತಲಾಕ್ ನೀಡುವ ಪತಿಗೆ ಈ ಕಾಯ್ದೆ ಅನ್ವಯ ಮೂರು ವರ್ಷದವರೆಗೆ ಸೆರೆವಾಸ ವಿಧಿಸಬಹುದಾಗಿದೆ ಮತ್ತು ಬಾಧಿತ ಮಹಿಳೆಯು ತನಗೆ ಮತ್ತು ಮಕ್ಕಳಿಗೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಹೇಳಲಾಗಿದೆ.
ರಫೇಲ್ ಕ್ಲೀನ್ಚಿಟ್
ಫ್ರಾನ್ಸ್ನ ಡಸಾಲ್ಟ್ ಎವಿಯೇಷನ್ ಕಂಪನಿಯಿಂದ 58 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಕಳೆದ ಡಿಸೆಂಬರ್ನಲ್ಲೇ ತಳ್ಳಿಹಾಕಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನಿಯನ್ನೂ ನ.14ರಂದು ವಜಾ ಮಾಡಿ ಸುಪ್ರೀಂಕೋರ್ಟ್, ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲವೆಂದು ಮೋದಿ ನೇತೃತ್ವದ ಸರ್ಕಾರಕ್ಕೆ ಕ್ಲೀನ್ಚಿಟ್ ನೀಡಿತು. ಜತೆಗೆ ಸುಪ್ರೀಂಕೋರ್ಟ್ ಬಗ್ಗೆ ಅಪದ್ಧ ನುಡಿದು ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ಕಾಂಗ್ರೆಸ್ ರಾಹುಲ್ ಗಾಂಧಿಯ ಕಿವಿಹಿಂಡಿತು. ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಭಾರತದ ಸಹಭಾಗಿಯನ್ನಾಗಿ ಮಾಡಲಾಗಿತ್ತು. ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಸ್ವಾಮ್ಯದ ಎಚ್ಎಎಲ್ ಬಿಟ್ಟು ಡಿಫೆನ್ಸ್ ಸಲಕರಣೆಯಲ್ಲಿ ಯಾವುದೇ ಅನುಭವ ಇಲ್ಲ ರಿಲಯನ್ಸ್ ಸಂಸ್ಥೆ ಈ ಗುತ್ತಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆರೋಪಿಸಿದವು. ಈ ದೂರು ಮತ್ತು ಕಳೆದ ಡಿಸೆಂಬರ್ನಲ್ಲಿ ರಫೇಲ್ ಕುರಿತು ನೀಡಿದ ತೀರ್ಪಿನ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕರಿಸಿತು. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಎಂಬುದನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿದೆ ಎಂದು ಲೋಕಸಭಾ ಚುನಾವಣೆಯ ರ್ಯಾಲಿಯೊಂದರಲ್ಲಿ ಹೇಳಿದರು. ಅವರ ವಿರುದ್ಧ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಸುಪ್ರೀಂಕೋರ್ಟ್ಗೆ ದೂರು ನೀಡಿದ್ದರು.
ಪ್ರಮುಖ ಯೋಜನೆ
ಪ್ರಧಾನಮಂತ್ರಿ ಕಿಸಾನ್ ಮಾನ-ಧನ ಯೋಜನೆ: ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ಇಳಿಗಾಲದಲ್ಲಿ ಪಿಂಚಣಿ ನೀಡಿ ಆರ್ಥಿಕ ಭದ್ರತೆ ಒದಗಿಸುವ ಯೋಜನೆ. 18ರಿಂದ 40 ವರ್ಷದೊಳಗಿನ ರೈತರು ಫಲಾನುಭವಿಗಳಾಗಬಹುದು. 60 ವರ್ಷವಾದ ಬಳಿಕ ತಿಂಗಳಿಗೆ 3 ಸಾವಿರ ರೂಪಾಯಿ ಪಿಂಚಣಿ, ಫಲಾನುಭವಿ ಮರಣಿಸಿದರೆ ಸಂಗಾತಿಗೆ ಪಿಂಚಣಿ ಪಾವತಿ
ಕೋವಿಡ್-19ರ ಅವಧಿಯಲ್ಲಿ ಸ್ವಾವಲಂಬಿಗಳಾಗಲು ‘ಆತ್ಮ ನಿರ್ಭರ ಭಾರತ’ ಆಂದೋಲನ ಘೋಷಣೆ.
ವಿಶ್ವಸಂಸ್ಥೆಯಲ್ಲಿ ಪಾಕ್ಗೆ ಚಾಟಿ
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆಯಲ್ಲಿ ಪಾಕಿಸ್ತಾನ, ವಿವಾದಿತ ಜಾಗದ ಕುರಿತು ಭಾರತ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಬೊಬ್ಬೆ ಹಾಕಿತು. ಜಾಗತಿಕ ಮಟ್ಟದ ಎಲ್ಲ ವೇದಿಕೆಗಳಲ್ಲೂ ಇದನ್ನು ಪ್ರಸ್ತಾಪಿಸಿತು. ಆದರೆ, ಚೀನಾ ಮತ್ತು ಕೆಲ ದೇಶಗಳನ್ನು ಹೊರತು ಪಡಿಸಿ ಬೇರ್ಯಾವುದೇ ದೊಡ್ಡ ದೇಶಗಳು ಪಾಕ್ನ ಪ್ರಲಾಪಕ್ಕೆ ಸೊಪು್ಪ ಹಾಕಲಿಲ್ಲ. ಕಳೆದ ಸೆಪ್ಟೆಂಬರ್ನಲ್ಲಿ ನಡೆದ ವಿಶ್ವಸಂಸ್ಥೆಯ 74ನೇ ಮಹಾಧಿವೇಶನದಲ್ಲೂ ಪಾಕ್ ಇದನ್ನು ಪ್ರಸ್ತಾಪಿಸಿತು.
ಆದರೆ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪಾಕ್ನ ಹೆಸರು ಪ್ರಸ್ತಾಪಿಸದೆ ಉಗ್ರವಾದಿಗಳ ಜತೆಗೆ ಉಗ್ರವಾದಕ್ಕೆ ಬೆಂಬಲ ನೀಡುವವರ ವಿರುದ್ಧವೂ ಕ್ರಮ ಅಗತ್ಯವೆಂದು ಪೆಟ್ಟು ನೀಡಿದರು. ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲೂ ಕಾಶ್ಮೀರ ಕುರಿತು ಚೀನಾ ಇಟ್ಟ ಪ್ರಸ್ತಾಪಕ್ಕೆ ಬೆಂಬಲ ಸಿಗಲಿಲ್ಲ.
2ನೇ ಅವಧಿಯಲ್ಲಿ ವಿದೇಶ ಪ್ರವಾಸ
ಕಳೆದ ಜೂನ್ನಿಂದ ನವೆಂಬರ್ವರೆಗೆ ಮೋದಿ 14 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಪೈಕಿ ಫ್ರಾನ್ಸ್ಗೆ ಎರಡು ಸಾರಿ ಪ್ರವಾಸ ಕೈಗೊಂಡಿದ್ದಾರೆ. ಭಾರತದ ಅದ್ಯಮ ಶಕ್ತಿ ತೋರ್ಪಡಿಸುವಿಕೆ, ಭಾರತ ಜತೆ ಪ್ರವಾಸಿ ರಾಷ್ಟ್ರದ ಸಂಬಂಧ ಸುಧಾರಣೆ, ವಾಣಿಜ್ಯ- ವಾಹಿವಾಟಿಗೆ ಉತ್ತೇಜನ ಬಹುಮುಖ್ಯವಾಗಿ ಹೆಚ್ಚಿನ ಮಟ್ಟದಲ್ಲಿ ವಿದೇಶಿ ಹೂಡಿಕೆ ಆಕರ್ಷಿಸುವುದು ಈ ಭೇಟಿಯ ಮುಖ್ಯ ಉದ್ದೇಶ.
ಎರಡನೇ ಅವಧಿಯ ಪ್ರಮುಖ ಆರ್ಥಿಕ ಸುಧಾರಣೆ
- ಸಾರ್ವಜನಿಕ ವಲಯದ 10 ಬ್ಯಾಂಕ್ಗಳನ್ನು 4 ಬೃಹತ್ ಬ್ಯಾಂಕ್ಗಳಾಗಿ ವಿಲೀನ
- ದೇಶೀಯ ಕಾರ್ಪೆರೇಟ್ ಕಂಪನಿಗಳ ತೆರಿಗೆ ಶೇ. 30ರಿಂದ ಶೇ.22ಕ್ಕೆ ಇಳಿಕೆ. ಹೊಸದಾಗಿ ಸ್ಥಾಪಿತವಾಗುವ ಕಂಪನಿಗಳಿಗೆ ಶೇ. 25ರಿಂದ ಶೇ. 15ಕ್ಕೆ ಇಳಿಕೆ
- ಏರ್ ಇಂಡಿಯಾವನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ನಿರ್ಧಾರ
- ವಿಮಾ ಸಂಸ್ಥೆ, ರಿಟೇಲ್ ಇ-ಕಾಮರ್ಸ್, ರಕ್ಷಣಾ ವಲಯದಲ್ಲಿ ಎಫ್ಡಿಐ ಶೇ. 50ಕ್ಕಿಂತ ಹೆಚ್ಚಿಸಲು ಅವಕಾಶ
ಒಂದು ದೇಶ ಒಂದು ಕಾರ್ಡ್
ಸಾರ್ವಜನಿಕ ಪಡಿತರ ವ್ಯವಸ್ಥೆಯ ಫಲಾನುಭವಿಗಳು ದೇಶ ಯಾವುದೇ ಭಾಗದಲ್ಲಿದ್ದರೂ ಅವರು ಇರುವಲ್ಲೇ ಉಚಿತ ಮತ್ತು ರಿಯಾಯಿತಿ ದರದಲ್ಲಿ ಪಡಿತರ ದೊರೆಯುವ ವ್ಯವಸ್ಥೆ ಇದು. ಫಲಾನುಭವಿಗಳ ಆಧಾರ್ ಸಂಖ್ಯೆ ಪಡಿತರ ಚೀಟಿಗೆ ಜೋಡಣೆಯಾಗಿರುವ ಕಾರಣ ಕುಟುಂಬದ ಓರ್ವ ಸದಸ್ಯ ಬೇರೆ ರಾಜ್ಯದಲ್ಲಿ ಇದ್ದರೂ ಆತನೂ ತನ್ನ ಪಾಲಿನ ಪಡಿತರ ಪಡೆದುಕೊಳ್ಳಲು ಅವಕಾಶ ನೀಡುವ ವಿಶೇಷ ಯೋಜನೆ ಇದು. ಇದು ಮುಂದಿನ ಆಗಸ್ಟ್ನಿಂದ ಜಾರಿಗೆ ಬರಲಿದೆ.
ಕರೊನಾ ಬಿಕ್ಕಟ್ಟು ನಿವಾರಣೆಗೆ ಕ್ರಮ
ಕೋವಿಡ್-19 ಕಾರಣ ಘೋಷಿಸಲಾದ ಲಾಕ್ಡೌನ್ ಪರಿಣಾಮದಿಂದ ಅಸ್ತವ್ಯಸ್ತಗೊಂಡ ಆರ್ಥಿಕತೆಯ ಚೇತರಿಕೆಗಾಗಿ ಸ್ವಾವಲಂಬಿ ಭಾರತ ಅಭಿಯಾನದ ಟಾನಿಕ್ ನೀಡಿದ ಪ್ರಧಾನಿ ನರೇಂದ್ರ ಮೋದಿ, 20 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಪರಿಹಾರದ ವಿಶೇಷ ಪ್ಯಾಕೇಜ್ ಘೋಷಿಸಿದರು. ಈ ಮೂಲಕ ಜನರಲ್ಲಿ ಮತ್ತು ಸಾಲ ನೀಡಲು ಬ್ಯಾಂಕ್ಗಳಲ್ಲಿ ಹಣ ಹರಿವು ಇರುವಂತೆ ನಾನಾ ಉಪಕ್ರಮಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೂಲಕ ಪ್ರಕಟಿಸಿದರು. ಈ ಪ್ಯಾಕೇಜ್ ಬಜೆಟ್ ಕೆಲವು ಮಂಜೂರಾತಿ, ಸರ್ಕಾರ ಮೊದಲ ಹಂತದಲ್ಲಿ ಘೋಷಣೆ ಮಾಡಿದ ವಿತ್ತೀಯ ಪರಿಹಾರ 1.92 ಕೋಟಿ ರೂಪಾಯಿ ಪ್ಯಾಕೇಜ್ ಹಾಗೂ ಆರ್ಬಿಐ ಮೇ 12ಕ್ಕೆ ಮುನ್ನ ಘೋಷಿಸಿದ ವಿವಿಧ ರೀತಿಯ ನೆರವಿನ ಮೊತ್ತ 8,01,603 ಕೋಟಿ ರೂಪಾಯಿ ಸೇರಿ ಒಟ್ಟು ಪರಿಹಾರ 20,97,053 ಕೋಟಿ ರೂಪಾಯಿ.
17ನೇ ಲೋಕಸಭೆ ಅಂಗೀಕರಿಸಿದ ಪ್ರಮುಖ ಮಸೂದೆಗಳು…
ಕಾನೂನುಬಾಹಿರ ಚಟುವಟಿಕೆ (ತಡೆ) ತಿದ್ದುಪಡಿ ಮಸೂದೆ (ಯುಎಪಿಎ): 1967ರ ಯುಎಪಿಎ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ವಿಧ್ವಂಸಕ ಕೃತ್ಯ ಎಸಗುವ ಸಮಾಜಘಾತುಕರನ್ನು ಭಯೋತ್ಪಾದಕನೆಂದು ಘೋಷಿಸುವ ಮತ್ತು ಅಂಥವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಬಲ ಕೇಂದ್ರ ಸರ್ಕಾರಕ್ಕೆ ಪ್ರಾಪ್ತಿ.
2013ರ ಕಂಪನಿ ಕಾಯ್ದೆಗೆ ತಿದ್ದುಪಡಿ: ಇದರಿಂದ ಕಂಪನಿಗಳ ಷೇರು ಮಾರಾಟ ಪ್ರಕ್ರಿಯೆ ಸುಧಾರಣೆ, ಸಾಮಾಜಿಕ ಹೊಣೆಗಾರಿಕೆ ಕಟ್ಟುನಿಟ್ಟು, ಕಾನೂನು ಉಲ್ಲಂಘನೆಗೆ 25 ಲಕ್ಷ ರೂಪಾಯಿ ವರೆಗೂ ದಂಡ ವಿಧಿಸಲು ಅವಕಾಶ.
ದಿವಾಳಿತನದ ಕಾನೂನು ತಿದ್ದುಪಡಿ ಮಸೂದೆ: 180 ದಿನದೊಳಗೆ ದಿವಾಳಿತನ ನಿರ್ಣಯ ಪ್ರಕ್ರಿಯೆ ಮುಗಿಸಬೇಕು ಎಂಬ ಸುಧಾರಣೆ.
ಸಮಾನ ವೇತನ ಸಂಹಿತೆ ಮಸೂದೆ: ಒಂದೇ ರೀತಿಯ ಕೆಲಸ ಮಾಡುವ ಕಾರ್ವಿುಕರಿಗೆ ಸಮಾನ ವೇತನ ನೀಡಲು ಅನುವು ಮಾಡಿಕೊಟ್ಟ ಮಸೂದೆ.
ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ: ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರ ಮತ್ತು ರಾಜ್ಯಗಳ ಮಾಹಿತಿ ಆಯುಕ್ತರ ಸೇವಾವಧಿ ಸರ್ಕಾರದ ವಿವೇಚನೆಗೆ ಎಂಬ ವ್ಯಾಖ್ಯಾನ.
ಅನಿಯಂತ್ರಿತ ಠೇವಣಿ ನಿಷೇಧ ಮಸೂದೆ: ಖಾಸಗಿ ವಲಯ, ಸಹಕಾರ ವಲಯ ಮತ್ತು ಚೀಟ್ಫಂಡ್ಗಳಿಂದ ಗ್ರಾಹಕರಿಗೆ ಆಗುತ್ತಿದ್ದ ವಂಚನೆ ತಡೆಯಲು ರೂಪಿಸಿದ ಮಸೂದೆ. ಅಧಿಕ ಬಡ್ಡಿ ಆಸೆ ತೋರಿಸಿ ಠೇವಣಿ ಸಂಗ್ರಹಿಸಿ ವಂಚನೆ ಮಾಡುವವರಿಗೆ ದುಃಸ್ವಪ್ನವಾದ ಕಾನೂನು.
ಪೋಕ್ಸೊ ಕಾಯ್ದೆಗೆ ತಿದ್ದುಪಡಿ: ಮಕ್ಕಳನ್ನು ಅಶ್ಲೀಲಚಿತ್ರಗಳಿಗೆ ಬಳಸಿದರೆ ಐದು ವರ್ಷ ಕಠಿಣ ಕಾರಾಗೃಹವಾಸ ಕಳುಹಿಸುವ ಕಾನೂನು.
ಮೋಟಾರ ವಾಹನ ಮಸೂದೆ: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಭಾರಿ ದಂಡ ವಿಧಿಸುವ ನಿಯಮಾವಳಿಯ ಕಾಯ್ದೆ.
ಆಧಾರ್ ಮತ್ತು ಇನ್ನಿತರ ಕಾನೂನು: ಸಾಮಾಜಿಕ ಭದ್ರತಾ ಯೋಜನೆಗಳಿಗೆ ಮತ್ತು ಐಟಿ ರಿಟರ್ನ್ಸ್ಗೆ ಆಧಾರ್ ಜೋಡಣೆ ಕಡ್ಡಾಯ.
ಸಚಿವರಿಗೆ 100 ದಿನ ಟಾರ್ಗೆಟ್
2024-25ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ ಕೊಂಡೊಯ್ಯುವ ಮಹತ್ವ ಗುರಿಯನ್ನು ಹಾಕಿಕೊಂಡಿರುವ ಪ್ರಧಾನಿ ಮೋದಿ. ಇದನ್ನು ಸಾಧಿಸಲು ಎರಡನೇ ಸಲ ಸರ್ಕಾರ ರಚನೆಯಾದ ದಿನವೇ ಮಂತ್ರಿಗಳಿಗೆ 100 ದಿನ ಗುರಿಯನ್ನು ನೀಡಿದರು. ಅಭಿವೃದ್ಧಿ, ವಿಶ್ವಾಸ ಮತ್ತು ದೊಡ್ಡ ಬದಲಾವಣೆ ಮೂಲಮಂತ್ರದೊಮದಿಗೆ ಹತ್ತಂಶದ ಕಾರ್ಯಕ್ರಮವನ್ನೂ ಪಟ್ಟಿ ಮಾಡಿದ್ದರು.
1 ಆರ್ಥಿಕ ಪ್ರಗತಿ ಕುಂಠಿತಗೊಳಿಸುವ ಅಡಚಣೆಗಳ ನಿವಾರಣೆ
2 ಹೂಡಿಕೆ ಆಕರ್ಷಿಸಲು ಸುಧಾರಣೆ
3 ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನ
4 ಕಾರ್ಯಾಂಗದ ಸಬಲೀಕರಣ ಮತ್ತು ಮುಕ್ತ ಅವಕಾಶ. ಹೊಸತನಕ್ಕೆ ಪ್ರೋತ್ಸಾಹ
5 ಜನಪರ ಸರ್ಕಾರ ಮತ್ತು ಜನಮುಖಿ ಆಡಳಿತ
6 ಅಂತರ್ ಸಚಿವಾಲಯದ ಸಮಸ್ಯೆ ಇತ್ಯರ್ಥಕ್ಕೆ ಹೊಸದೊಂದು ವ್ಯವಸ್ಥೆ
7 ಸರ್ಕಾರಿ ನೀತಿ ಮತ್ತು ಯೋಜನೆಗಳ ಊರ್ಜಿತತೆ ಮತ್ತು ಸ್ಥಿರತೆ
8 ಪಾರದರ್ಶಕತೆಗೆ ಉತ್ತೇಜನ
9 ನೀರು, ರಸ್ತೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯದ ಕಾರ್ಯಕ್ರಮಗಳಿಗೆ ಆದ್ಯತೆ
10 ಮೂಲಸೌಕರ್ಯ ವಲಯದಲ್ಲಿ ಸುಧಾರಣೆ