ಉಳ್ಳಾಲ: ಮೂರು ತಿಂಗಳ ಹಿಂದೆ ತೊಕ್ಕೊಟ್ಟಿನಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಹಳ್ಳ ಹಿಡಿದಿದ್ದ ಪ್ರಕರಣ ಭೇದಿಸಲು ಆರೋಪಿ ಕದ್ದಿದ್ದ ಮೊಬೈಲ್ ನೆರವಾಗಿರುವುದು ವಿಶೇಷ.
ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಉಬೇದುಲ್ಲಾ(27) ಬಂಧಿತ. ಈತ ಮಾ.19ರಂದು ಮುಂಜಾನೆ ತೊಕ್ಕೊಟ್ಟು ಓವರ್ಬ್ರಿಡ್ಜ್ ಬಳಿ ನಿವಾಸಿ, ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿ ಜಯರಾಜ್ ಕೆ. ಅವರ ಮನೆಗೆ ನುಗ್ಗಿ 120 ಗ್ರಾಂ ಚಿನ್ನ ಮತ್ತು ಮೂರು ಮೊಬೈಲ್ಗಳನ್ನು ಕದ್ದಿದ್ದ.
ಪ್ರಕರಣ ದಾಖಲಿಸಿದ್ದ ಉಳ್ಳಾಲ ಪೊಲೀಸರು ಆರೋಪಿಯ ಶೋಧ ಆರಂಭಿಸಿದ್ದರು. ಆದರೆ ಕಳ್ಳ ಯಾವುದೇ ಕುರುಹು ಬಿಟ್ಟು ಹೋಗದ ಕಾರಣ ಪ್ರಕರಣ ಭೇದಿಸುವುದು ಸವಾಲಾಗಿತ್ತು. ಇನ್ಸ್ಪೆಕ್ಟರ್ ಸಂದೀಪ್ ಕಳವಾಗಿದ್ದ ಮೊಬೈಲ್ ಫೋನ್ನ ಐಎಂಇಐ ನಂಬರ್ ಟ್ರೇಸ್ ಮಾಡಿದಾಗ, ಒಂದು ಮೊಬೈಲ್ ಆರೋಪಿಯ ಸುಳಿವು ನೀಡಿತ್ತು. ಕಳವುಗೈದ ಒಂದು ಮೊಬೈಲನ್ನು ಆತ ತನ್ನ ಭಾವ ಇಸ್ಮಾಯಿಲ್ ಎಂಬುವರಿಗೆ ನೀಡಿದ್ದು, ಅವರು ಸಿಮ್ ಹಾಕಿ ಬಳಸುತ್ತಿದ್ದರು. ಇದು ಉಬೈದುಲ್ಲಾ ಬಂಧನಕ್ಕೆ ಕಾರಣವಾಯಿತು.
ಪೊಲೀಸರು ಆರೋಪಿಯಿಂದ 95 ಗ್ರಾಂ ಚಿನ್ನ ವಶಪಡಿಸಿದ್ದಾರೆ. ಉಳಿದ 25 ಗ್ರಾಂ ಚಿನ್ನ ಮಾರಾಟ ಮಾಡಿದ್ದ ಆರೋಪಿ ಹೊಸ ಬೈಕ್ ಖರೀದಿಸಿದ್ದ. ಪೊಲೀಸರು ಆ ಬೈಕ್, ಆಟೋ ರಿಕ್ಷಾ ಮತ್ತು ಎರಡು ಮೊಬೈಲ್ಗಳನ್ನೂ ವಶಪಡಿಸಿಕೊಂಡಿದ್ದಾರೆ.