ಸಿದ್ದಾಪುರ: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಸಕಾಲದಲ್ಲಿ ಸ್ಪಂದಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸಿದ್ದಾಪುರದಲ್ಲಿ ಬುಧವಾರ ಅತಿಥಿ ಉಪನ್ಯಾಸಕರ ಸಂಘದಿಂದ ಸನ್ಮಾನಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಶ್ಯಾಂಪ್ರಸಾದ್ ಮಾತನಾಡಿ, ದಶಕಗಳಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲಾಗುತ್ತಿದ್ದರೂ ಸೂಕ್ತ ಸ್ಪಂದನೆ ದೊರೆಯುತ್ತಿರಲಿಲ್ಲ. ಶಾಸಕ ಎ.ಎಸ್.ಪೊನ್ನಣ್ಣ ಅವರು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸುವ ಮೂಲಕ ವೇತನ ಸಹಿತ ರಜೆ, ಮಹಿಳಾ ಉಪನ್ಯಾಸಕರಿಗೆ ಹೆರಿಗೆ ರಜೆ, 60 ವರ್ಷ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಇಡುಗಂಟು ಕೊಡಿಸಲು ಸರ್ಕಾರದಿಂದ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ 5 ಲಕ್ಷ ರೂ.ವಿಮೆ ಯೋಜನೆ ಜಾರಿಗೆ ತರಲಾಗಿದೆ. ಇವೆಲ್ಲವೂ ಶಾಸಕರ ಪರಿಶ್ರಮದಿಂದ ಸಾಧ್ಯವಾಗಿದ್ದು, ಅದಕ್ಕಾಗಿ ಅಭಿನಂದಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ನಟರಾಜ್ ಮಾತನಾಡಿ, ನಮ್ಮ ಹೋರಾಟಕ್ಕೆ ಸರ್ಕಾರ ಸಕಾಲದಲ್ಲಿ ಸ್ಪಂದಿಸಿದೆ. ಭ್ರಾತೃತ್ವ ರಜೆ, ಎಂಫಿಲ್ ಪೂರೈಸಿದ ಉಪನ್ಯಾಸಕರ ಕಾಯಂ ಮಾಡುವುದರ ಜತೆಗೆ ಅಕಾಲಿಕ ಮರಣ ಹೊಂದಿದ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ನೆರವು ನೀಡಬೇಕು ಎಂದರು. ಈ ಸಂಬಂಧ ಶಾಸಕ ಪೊನ್ನಣ್ಣ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನೋಜ್ ಕುಮಾರ್, ಗಿರೀಶ್, ಚಂದ್ರ ಪ್ರಕಾಶ್, ಮೋಹನ್ಕುಮಾರ್, ನವೀನ್, ಶಾಂತಕುಮಾರ್, ಸೂರ್ಯಕುಮಾರ್, ರಾಜೇಶ್, ಸಿದ್ದರಾಮೇಗೌಡ ಹಾಜರಿದ್ದರು.