ಸಿದ್ದಾಪುರ: ಶಾಸಕ ಎ.ಎಸ್.ಪೊನ್ನಣ್ಣ ಭಾನುವಾರ ಸುಮಾರು ಒಂದೂವರೆ ಕಿ.ಮೀ ನಡೆದುಕೊಂಡು ಕಕ್ಕಟ್ಟುಕಾಡು ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಎಂಬಲ್ಲಿ ಸುಮಾರು 40 ಕುಟುಂಬ ವಾಸವಿದ್ದು, ಹಲವು ವರ್ಷಗಳಿಂದ ಕಾಲುದಾರಿಯನ್ನೇ ಬಳಸುತ್ತಿದೆ. ಗ್ರಾಮಕ್ಕೆ ಯೋಗ್ಯ ರಸ್ತೆ ಮಾಡಬೇಕೆಂದು ಹಲವು ಬಾರಿ ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಶಾಸಕರ ಗಮನ ಸೆಳೆದರು. ಗುಹ್ಯ ಅಗಸ್ತ್ಯ ದೇವಾಲಯ ಸಮೀಪದಿಂದ ಕಾಲು ದಾರಿಯಲ್ಲಿ ಗ್ರಾಮಕ್ಕೆ ಆಗಮಿಸಿದ ಶಾಸಕರಿಗೆ ರಸ್ತೆಯ ಸಮಸ್ಯೆ ಕುರಿತು ಅಳಲು ತೋಡಿಕೊಂಡರು.
ಗ್ರಾಮಸ್ಥ ಪಿ.ಕೆ.ಚಂದ್ರನ್ ಮಾತನಾಡಿ, ಹಲವು ವರ್ಷಗಳಿಂದ ವಾಹನ ಸೌಕರ್ಯವಿಲ್ಲದ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ನಿತ್ಯ ವಿದ್ಯಾರ್ಥಿಗಳು ಕಾಲುದಾರಿಯಲ್ಲೇ ನಡೆದುಕೊಂಡು ಹೋಗುತ್ತಿದ್ದಾರೆ. ಮಳೆಗಾಲದ ಸಂದರ್ಭ ತೀವ್ರ ಸಮಸ್ಯೆಯಾಗುತ್ತಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಪಳನಿಸ್ವಾಮಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಪ್ರತೀಶ, ಮುಖಂಡರಾದ ಎಂ.ಎಸ್.ವೆಂಕಟೇಶ್, ಎಂ.ಬಿಜೋಯ್, ಆರ್.ಕೆ.ಸಲಾಂ, ಸೂರಜ್ ಹೊಸೂರು, ಗ್ರಾಮಸ್ಥರಾದ ಹನೀಫ, ಎನ್.ಮಣಿ, ರತಿ, ಪ್ರೀನ ಇತರರಿದ್ದರು.