ಬೆಂಗಳೂರು: ಕರೊನಾ ಅತಿ ವೇಗದಲ್ಲಿ ಹಬ್ಬುತ್ತಿದೆ. ಪ್ರತಿನಿತ್ಯ ನೂರಾರು ಸೋಂಕಿತರಿಗೆ ಆಸ್ಪತ್ರೆಯ ಅವಶ್ಯಕತೆ ಕಾಣಿಸಿಕೊಳ್ಳುತ್ತಿದೆ. ಆದರೆ ಬೆಡ್ ಬ್ಲಾಕ್ ದಂಧೆಯಿಂದಾಗಿ ಅನೇಕರಿಗೆ ಅಗತ್ಯ ಸಮಯದಲ್ಲಿ ಬೆಡ್ ಸಿಗದೆ ಪ್ರಾಣ ಬಿಡುವಂತಾಗಿದೆ. ಬೇರೆ ಯಾರೋ ಅಲ್ಲ, ಕ್ಷೇತ್ರದ ಶಾಸಕರೇ ಕೇಳಿದರೂ ಬೆಡ್ ಇಲ್ಲ ಎನ್ನುವ ಉತ್ತರ ಕೇಳಿಬರಲಾರಂಭಿಸಿದೆ. ಈ ಕುರಿತಾಗಿ ಶಾಸಕ ರವಿ ಸುಬ್ರಹ್ಮಣ್ಯ ಕೂಡ ಮಾತನಾಡಿದ್ದಾರೆ.
ನಾನು ಬಸವನಗುಡಿಯ ಶಾಸಕ. 2 ಲಕ್ಷ ಜನಸಂಖ್ಯೆ ಇರುವ ಕ್ಷೇತ್ರ ನನ್ನದು. ಅದಕ್ಕಾಗಿಯೇ ಒಂದು ದಿನಕ್ಕೆ 5 ಬೆಡ್ ಮತ್ತು 2 ಗಂಟೆ ನನಗೆ ಕೊಡಿ ಎಂದು ಕೇಳಿದ್ದೇನೆ. ಆದರೆ ನನಗೆ ಈವರೆಗೂ ಒಂದೇ ಒಂದು ಬೆಡ್ ಕೂಡ ಸಿಕ್ಕಿಲ್ಲ. ನಾನು ಶಾಸಕನಾಗಿ ಫೋನ್ ಮಾಡಿದ್ರೂ ಫೋನ್ ಎತ್ತುವುದಿಲ್ಲ. ಒಂದು ವೇಳೆ ಎತ್ತಿಬಿಟ್ಟರೆ ಬೆಡ್ ಇಲ್ಲ ಎನ್ನುವ ರೆಡಿಮೇಡ್ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದ್ದಾರೆ.
ಬೆಡ್ ವ್ಯವಸ್ಥೆ ಮಾಡುತ್ತಿಲ್ಲ ಎಂದು ಜನಪ್ರತಿನಿಧಿಗಳಾದ ನಮಗೆ ಬೈಯುತ್ತಾರೆ. ಆದರೆ ಇಲ್ಲಿ ನಾವು ಏನೇ ಸರ್ಕಸ್ ಮಾಡಿದರೂ ನಮಗೆ ಬೆಡ್ ಸಿಗುತ್ತಿಲ್ಲ. ರಾಮಯ್ಯ ಆಸ್ಪತ್ರೆಯಲ್ಲಿ ರಾಮನಾಥ್ ಅವರ ಹೆಸರಲ್ಲಿ 5 ಬಾರಿ ಬೆಡ್ ಬ್ಲಾಕ್ ಆಗುತ್ತೆ. ಅವರಿಗೆ ಬೇಕಿರೋ ವ್ಯಕ್ತಿಗಳಿಗೆ ಬೆಡ್ ಒದಗಿಸಲು ಈ ದಂಧೆ ಮಾಡುತ್ತಿದ್ದಾರೆ. ರೆಮಿಡಿಸಿವರ್ ಇಂಜೆಕ್ಷನ್ ಕೂಡ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದೆ. 11,316 ಬೆಡ್ ನನ್ನ ಕ್ಷೇತ್ರದಲ್ಲಿದೆ. ಅದರಲ್ಲಿ 9,690 ಬೆಡ್ ಭರ್ತಿ ಆಗಿದೆ. ಇನ್ನುಳಿದ ಬೆಡ್ನಲ್ಲಿ ಒಂದೇ ಒಂದು ಬೆಡ್ ಕೂಡ ನನಗೆ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.