ಗುಬ್ಬಿ: ಸಂಸದರಿಗೆ ಹಣ ನೀಡಿ ಬಂದಿರುವುದಾಗಿ ಹೇಳುವ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದರು.
ಪಟ್ಟಣದ 19ನೇ ವಾರ್ಡ್ ಬಿಲ್ಲೇಪಾಳ್ಯದಲ್ಲಿ 96 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಹಸೀಲ್ದಾರ್, ಪಪಂ ಮುಖ್ಯಾಧಿಕಾರಿಗಳು ನೇರ ಲಂಚ ಬೇಡಿಕೆ ಇಟ್ಟು ಸಾರ್ವಜನಿಕರಿಂದ ಸುಲಿಗೆಗೆ ನಿಂತಿರುವ ಬಗ್ಗೆ ಜನರಿಂದಲೇ ದೂರುಗಳು ಬಂದಿವೆ. ಲಂಚ ನೀಡಲೇಬೇಕು ಎನ್ನುವ ಧೋರಣೆ ಇರುವ ಅಧಿಕಾರಿಗಳಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕಿಡಿಕಾರಿದರು.
ಈ ಮೊದಲು ನಾನು ಕರೆತಂದ ದಕ್ಷ ಅಧಿಕಾರಿ ತಹಸೀಲ್ದಾರ್ ಹಗಲಿರುಳು ಶ್ರಮಿಸಿ ಜನಪರ ಹೆಸರು ಗಳಿಸಿದ್ದರು. ಅಂತಹ ಅಧಿಕಾರಿಗಳಿಂದ ತಮ್ಮ ಬೇಳೆ ಬೇಯಲಿಲ್ಲ ಎಂಬ ಕಾರಣಕ್ಕೆ ಆಡಳಿತ ಪಕ್ಷದ ಕೆಲ ಧುರೀಣರು ಅವರ ಎತ್ತಂಗಡಿಗೆ ಶ್ರಮಪಟ್ಟಿದ್ದಾರೆ. ಆಡಳಿತಾರೂಢ ಮುಖಂಡರ ಶ್ರೀರಕ್ಷೆ ಇದೆ ಎನ್ನುವುದೇ ವರದಾನ ಮಾಡಿಕೊಂಡ ಇಂತಹ ಅಧಿಕಾರಿಗಳಿಂದ ಸಾರ್ವಜನಿಕರನ್ನು ಕಾಪಾಡುವುದೇ ಕಷ್ಟವಾಗುತ್ತಿದೆ ಎಂದರು.
ತಾಲೂಕಿನ ಅಧಿಕಾರಿಗಳ ಭ್ರಷ್ಟಚಾರ ನಡುವೆ ಬಿಜೆಪಿ ಸರ್ಕಾರ ಒಂದು ವರ್ಷದಿಂದ ಯಾವುದೇ ಅನುದಾನ ನೀಡಿಲ್ಲ. ಅಂತೂ ಇಂತೂ ಒಂದಿಷ್ಟು ಅನುದಾನದಲ್ಲಿ ಕೆಲಸ ಕೇಳಿ ಪತ್ರ ಬರೆದರೆ ಶಾಸಕರ ಪತ್ರಕ್ಕೆ ಬೆಲೆ ನೀಡುವುದಿಲ್ಲ. ಗುತ್ತಿಗೆದಾರರಿಂದ ಮಧ್ಯವರ್ತಿಗಳು ಶೇ.10 ಕಮಿಷನ್ ನೀಡುವಂತೆ ಸೂಚಿಸುತ್ತಾರೆ. ನಾಲ್ಕು ಬಾರಿ ಶಾಸಕನಾಗಿ ಈ ಮಟ್ಟಿನ ಭ್ರಷ್ಟಾಚಾರವನ್ನು ನಾನೆಂದೂ ನೋಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಪಂ ಮಾಜಿ ಅಧ್ಯಕ್ಷ ಬಿಲ್ಲೇಪಾಳ್ಯ ನರಸಿಂಹಮೂರ್ತಿ, ಪಪಂ ಸದಸ್ಯರಾದ ಸಿ.ಮೋಹನ್, ಜಿ.ಎನ್.ಅಣ್ಣಪ್ಪಸ್ವಾಮಿ, ಕುಮಾರ್, ಶೌಕತ್ಆಲಿ, ರೇಣುಕಾಪ್ರಸಾದ್, ಮುಖಂಡರಾದ ಲೋಕೇಶ್ಬಾಬು, ರಾಜಣ್ಣ, ಕುಮಾರ್, ಜಿ.ಎಸ್.ಮಂಜುನಾಥ್, ಶಿವಪ್ಪ, ಕಾಂತರಾಜು ಅರಸ್, ವಿಎಸ್ಎಸ್ಎನ್ ಅಧ್ಯಕ್ಷ ನಾಗರಾಜು ಇತರರು ಇದ್ದರು.