ತಾಳಿಕೋಟೆ: ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಗ್ರಾಮಗಳಲ್ಲಿ ಸತತ ಮಳೆಯಿಂದ ಬೆಳೆ ಹಾಗೂ ಮನೆಗಳ ಹಾನಿಗೊಳಗಾದ ಸಮಗ್ರ ವರದಿ ತಯಾರಿಸಿಕೊಂಡು ಕೂಡಲೇ ಸಲ್ಲಿಸಬೇಕೆಂದು ತಾಳಿಕೋಟೆ ತಹಸೀಲ್ದಾರ್ ಅನೀಲಕುಮಾರ ಢವಳಗಿಗೆ ಸೂಚಿಸಲಾಗಿದೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದ್ದಾರೆ.
ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಮುರ್ನಾಲ್ಕು ದಿನಗಳಿಂದ ವರುಣನ ಆರ್ಭಟಕ್ಕೆ ಜನ-ಜಾನುವಾರುಗಳು ತತ್ತರಿಸಿವೆ. ರೈತರ ಜಮೀನಿನಲ್ಲಿ ಬೆಳೆದ ತೋಗರಿ, ಹತ್ತಿ ಇನ್ನಿತರ ಬೆಳೆಗಳು ಹಾನಿಯಾಗಿವೆ ಎಂಬ ಮಾಹಿತಿ ಬಂದಿದ್ದು, ಕೂಡಲೇ ಸಮಗ್ರ ಮಾಹಿತಿ ನೀಡಲು ತಿಳಿಸಿದ್ದೇನೆ ಎಂದರು.
ಅಲ್ಲದೆ, ಡೋಣಿ ನದಿ ಪ್ರವಾಹ ಹೆಚ್ಚುತ್ತಿದ್ದು, ನದಿ ತೀರದ ಜಮೀನುಗಳಿಗೆ ನೀರು ನುಗ್ಗಿ ಬೆಳೆಹಾನಿಯಾಗಿದೆ. ಯಾರೂ ಡೋಣಿ ನದಿ ತೀರಕ್ಕೆ ಹೋಗಬಾರದು. ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯಿಂದಲೂ ಕ್ರಮ ಜರುಗಿಸಲು ಜಿಲಾಡಳಿತದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.