ಬೆಂಗಳೂರು: ನಾನೊಬ್ಬ ದಲಿತ ಶಾಸಕ ಎಂಬ ಕಾರಣದಿಂದ ಮೊನ್ನೆ ನನ್ನ ಕ್ಷೇತ್ರದಲ್ಲಿ ನಡೆದ ಘಟನೆ ಸಂಬಂಧ, ಗೃಹ ಸಚಿವ ಆರಗ ಜ್ಞಾನೇಂದ್ರ ಸೌಜನ್ಯಕ್ಕೂ ನನ್ನನ್ನು ಮಾತನಾಡಿಸಿ ವಿಷಾದ ಹೇಳುವ ಕೆಲಸ ಮಾಡಿಲ್ಲ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬದವರನ್ನು ನೋಡಿ, ಸಾಂತ್ವಾನ ಹೇಳಲು ತೆರಳಿದ್ದೆ. ಈ ವೇಳೆ ಜನರು ನನಗೆ ಕಲ್ಲು ಹಾಗೂ ದೊಣ್ಣೆಯಿಂದ ಹೊಡೆಯಲು ಬಂದಿದ್ದರು. ಇದೊಂದು ಸಣ್ಣ ಘಟನೆ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ
ಈ ಬಗ್ಗೆ ನಾನು ದೂರು ನೀಡಿಲ್ಲ. ನಾನೊಬ್ಬ ಶಾಸಕ, ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಘಟನೆಯ ನಂತರ ಇದುವರೆಗೂ ನನ್ನನ್ನು ಮಾತನಾಡಿಸುವ ಕೆಲಸ ಮಾಡಿಲ್ಲ. ಸೌಜನ್ಯಕ್ಕೂ ಕರೆದು ಏನಾಯ್ತು ಎಂದು ಕೇಳುವ ಪ್ರಯತ್ನವೂ ಮಾಡಿಲ್ಲ. ಜನಪ್ರತಿನಿಧಿಗಳಿಗೆ ಹೀಗೆ ಆದರೆ ಜನರ ಪರಿಸ್ಥಿತಿ ಎಲ್ಲಿಗೆ ಹೋಗಲಿದೆ ಎಂದು ಪ್ರಶ್ನಿಸಿ, ಗೃಹ ಸಚಿವರ ಮೇಲೆ ಅಸಮಾಧಾನ ಹೊರಹಾಕಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನ ಆರೋಗ್ಯದ ಬಗ್ಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ನನಗೆ ಬಹಳ ತೊಂದರೆಯಾಗಿದ್ದು, ಕೊಲೆ ಮಾಡಲು ಬಂದವರು, ಹುಚ್ಚು ನಾಯಿ ಅಟ್ಟಿಸಿಕೊಂಡು ಬರುವ ರೀತಿಯಲ್ಲಿ ಜನ ನನ್ನನ್ನು ಅಟ್ಟಿಸಿಕೊಂಡು ಬಂದರು. ನಾನು ಅಂದು ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು. ಬಟ್ಟೆ ಹೋದ್ರೆ ಹೋಯ್ತ, ಪ್ರಾಣ ಹೋದ್ರೆ ಏನು ಗತಿ ಎಂದು ಹೇಳಿದರು.
ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಗೃಹ ಸಚಿವರು ಇಲ್ಲಿಯವರೆಗೆ ಶಾಸಕ ಅಲ್ಲ, ಸಹೋದ್ಯೋಗಿ ಅಂತಾನೂ ಪೋನ್ ಮಾಡಿಲ್ಲ. ಇವರು ಹೊಡೆಸಿಕೊಳ್ಳುವ ಜನ ಬೈಸಿಕೊಳ್ಳುವ ಜನ ಅಂತ ಅವರ ಮನಸ್ಸಿಗೆ ಬಂದಿರಬಹುದು. ಈ ಘಟನೆಯಲ್ಲಿ ಗೃಹ ಸಚಿವರು ಮೌನವಹಿಸಿರುವುದರ ಬಗ್ಗೆ ಬೇಸರವಿದೆ ಎಂದು ಹೇಳಿದರು.
ನನ್ನ ವಿಚಾರದಲ್ಲಿ ಗೃಹ ಸಚಿವರು ಸರಿಯಾಗಿ ನಡೆದುಕೊಂಡಿಲ್ಲ. ಇನ್ನು ಮುಂದೆಯೂ ಆನೆ ದಾಳಿ ನಡೆಯುತ್ತದೆ. ಕ್ಷೇತ್ರದಲ್ಲಿ ಏನಾದರು ಆದರೆ ಶಾಸಕರು ಸಾಂತ್ವಾನ ಹೇಳೋಕೆ ಹೋಗಬಾರದಾ? ಗೃಹ ಸಚಿವರ ನಡವಳಿಕೆ ಸರಿಯಿಲ್ಲ. ರಾಜ್ಯದ ಹೊಣೆ ಹೊತ್ತಿರುವ ತಾವು ನನ್ನ ಪ್ರಾಣ ಹೊಂದರೆ ಯಾರು ಹೊಣೆಗಾರರು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
VIDEO: ಕುಮಾರಸ್ವಾಮಿ ಬಾಯಲ್ಲಿ ಬಂತು ಕೆಟ್ಟ ಪದ; ಮಾಜಿ ಸಿಎಂ ಬೈದಿದ್ದು ಯಾರಿಗೆ?