ಮಧುರೈ: ಪೂರ್ತಿ ದೇಶ ಕರೊನಾ ಸೋಂಕಿನಿಂದಾಗಿ ನಲುಗಿದೆ. ಹೀಗಿರುವಾಗ ಅನೇಕರು ಅವರವರ ರಾಜ್ಯಗಳ ಕರೊನಾ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ. ಅದೇ ರೀತಿ ಇತ್ತೀಚೆಗೆ ತಮಿಳುನಾಡಿನ ಮಧುರೈನ ಏಳು ವರ್ಷದ ಬಾಲಕನೊಬ್ಬ ತಾನು ಕೂಡಿಟ್ಟಿದ್ದ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ಕೊಟ್ಟಿದ್ದು, ಅಲ್ಲಿನ ನೂತನ ಸಿಎಂ ಎಂ.ಕೆ.ಸ್ಟಾಲಿನ್ ಆತನಿಗೆ ಸರ್ಪೈಸ್ ನೀಡಿದ್ದಾರೆ.
ಮಧುರೈನ ಹರೀಶ್ (7) ಹೆಸರಿನ ಬಾಲಕ ಸೈಕಲ್ ತೆಗೆದುಕೊಳ್ಳಬೇಕೆಂದು ಹಣವನ್ನು ಕೂಡಿಟ್ಟಿದ್ದನಂತೆ. ಆದರೆ ಕರೊನಾ ಎರಡನೇ ಅಲೆಯಲ್ಲಿ ಜನರು ಸಾಯುತ್ತಿರುವುದನ್ನು ಕಂಡು ನೋವುಂಡ ಆತ, ತಾನು ಕೂಡಿಟ್ಟಿದ್ದ ಹಣವನ್ನು ರಾಜ್ಯದ ಕೋವಿಡ್ ಪರಿಹಾರ ನಿಧಿಗೆ ಕೊಟ್ಟಿದ್ದಾನೆ. ಅದರ ಜತೆ ಮುಖ್ಯಮಂತ್ರಿಗೆ ಒಂದು ಪತ್ರವನ್ನೂ ಬರೆದಿದ್ದಾನೆ. ನಾನು ಕೊಟ್ಟಿರುವ ಈ ಹಣದಲ್ಲಿ ಸೋಂಕಿತರಿಗೆ ಸಹಾಯ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾನೆ.
ಬಾಲಕನ ಸೇವಾ ಮನೋಭಾವದ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಅದರ ಬೆನ್ನಲ್ಲೇ ಸಿಎಂ ಎಂಕೆ ಸ್ಟಾಲಿನ್ ಬಾಲಕನಿಗೆ ಸರ್ಪೈಸ್ ಒಂದನ್ನು ನೀಡಿದ್ದಾರೆ. ಆತನ ಇಷ್ಟದ ಸೈಕಲ್ ಅನ್ನು ಅಲ್ಲಿನ ಶಾಸಕರ ಮುಖಾಂತರ ಬಾಲಕನಿಗೆ ಕೊಡಿಸಿದ್ದಾರೆ. ಭಾನುವಾರ ಬೆಳಗ್ಗೆ ಏಳುತ್ತಿದ್ದಂತೆಯೇ ಮನೆ ಎದುರು ತನ್ನಿಷ್ಟದ ಸೈಕಲ್ ನೋಡಿದ ಬಾಲಕ ಖುಷಿಯಿಂದ ಕುಣಿದಾಡಿದ್ದಾನೆ. ಸ್ಟಾಲಿನ್ ಬಾಲಕನೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾರೆ ಕೂಡ. (ಏಜೆನ್ಸೀಸ್)
ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳಲ್ಲಿ 26 ಸೋಂಕಿತರ ಸಾವು! ಹೈ ಕೋರ್ಟ್ ತನಿಖೆಗೆ ಒತ್ತಾಯಿಸಿದ ಆರೋಗ್ಯ ಸಚಿವ