ಶಿವಮೊಗ್ಗ: ಮಧು ಬಂಗಾರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆಂದು ಬೀಗುತ್ತಿದ್ದಾರೆ. ಅಧಿಕಾರಿಗಳ ಮೂಲಕ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕೆ ತಡೆವೊಡ್ಡುತ್ತಿದ್ದಾರೆ. ಇಂತಹ ದುಂಡಾವರ್ತನೆಯನ್ನು ಸಚಿವರು ಕೈಬಿಡಬೇಕು. ಇಲ್ಲವಾದರೆ ಪರಿಣಾವನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಎಚ್ಚರಿಕೆ ನೀಡಿದರು.
ಭಾರತ ಒಕ್ಕೂಟದ ವ್ಯವಸ್ಥೆಯನ್ನು ಒಳಗೊಂಡಿದ್ದು ಅದರಂತೆ ಆಡಳಿತ ನಡೆಸಬೇಕಾಗಿತ್ತದೆ. ಆದರೆ ಸಚಿವರು ಈ ರೀತಿ ಹೇಳುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಧು ಬಂಗಾರಪ್ಪ ಅವರಿಗೆ ಮಾಜಿ ಸಿಎಂ ಮಗ ಎನ್ನುವ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ. ಇನ್ನಾದರೂ ಅವರು ಪ್ರಬುದ್ಧರಾಗಿ ನಡೆದುಕೊಳ್ಳಬೇಕು. ಶಿಷ್ಠಾಚಾರ ಗೊತ್ತಿಲ್ಲದೆ ಇದ್ದರೆ ಸರ್ಕಾರದ ಮುಖ್ಯಕಾರ್ಯದರ್ಶಿ ಬಳಿ ಕೇಳಿ ತಿಳಿದುಕೊಳ್ಳಲಿ ಅದು ಬಿಟ್ಟು ಗೂಂಡಾಗಿರಿ ಮಾಡುವುದು ಸಚಿವ ಸ್ಥಾನಕ್ಕೆ ಘನತೆ ತರುವುದಿಲ್ಲ ಎಂದರು.