ಮುಂಬೈ: ಟಿಕ್ಟಾಕ್ ಸ್ಟಾರ್ ಒಬ್ಬಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಾವಿನ ಹಿಂದೆ ಮಹಾರಾಷ್ಟ್ರದ ಸಚಿವರೊಬ್ಬರ ಕೈವಾಡವಿದೆ ಎನ್ನುವ ಆರೋಪ ಕೇಳಿಬಂದಿದೆ. ತಮ್ಮ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದಂತೆಯೇ ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ರಾಜೀನಾಮೆ ನೀಡಿರುವ ಶಾಸಕ. “ಯುವತಿಯೊಬ್ಬಳ ಸಾವಿನ ಹಿಂದೆ ನನ್ನ ಕೈವಾಡವಿದೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಆ ಕಾರಣದಿಂದಾಗಿ ನಾನು ಈ ಹುದ್ದೆಯಲ್ಲಿ ಮುಂದುವರಿಯಲು ಬಯಸುತ್ತಿಲ್ಲ. ನನ್ನ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸಲ್ಲಿಸಿದ್ದೇನೆ. ಪ್ರಕರಣದ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆಯಾಗಿ ನಿಜಾಂಶ ಹೊರಬರಲಿ” ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪೂಜಾ ಚವಾಣ್ (23) ಹೆಸರಿನ ಯುವತಿ ತನ್ನ ಸಹೋದರನೊಂದಿಗೆ ಪುಣೆಯಲ್ಲಿ ವಾಸವಾಗಿದ್ದಳು. ಆಕೆ ಫೆಬ್ರವರಿ 8ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಸತ್ತ ಎರಡು ದಿನಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಕ್ಲಿಪ್ ಒಂದು ಹರಿದಾಡಿತ್ತು. ಅದರಲ್ಲಿ ಇಬ್ಬರು ಪುರುಷರು ಪೂಜಾಳ ಸಾವಿನ ಬಗ್ಗೆ ಮಾತನಾಡಿದ್ದು ರೆಕಾರ್ಡ್ ಆಗಿತ್ತು. ಆ ರೀತಿ ಮಾತನಾಡಿದ್ದರಲ್ಲಿ ಒಬ್ಬರು ಸಂಜಯ್ ರಾಥೋಡ್ ಎಂದು ಬಿಜೆಪಿ ಆರೋಪಿಸಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿ ಅನೇಕ ನಾಯಕರು, ಸಂಜಯ್ ರಾಜೀನಾಮೆಗೆ ಒತ್ತಾಯಿಸಿದ್ದರು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಇಂಧನ ಬೆಲೆ ಇಳಿಸುವವರೆಗೆ ಹಾಲಿನ ದರ ಲೀಟರ್ಗೆ 100 ರೂ! ಇದು ಹೊಸ ರೀತಿಯ ಪ್ರತಿಭಟನೆ