ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಬಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ಖುಷಿಯಿಂದಲೇ ಕೊಡುವೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿರುವ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿಸುವ ಬಗ್ಗೆ ಬುಧವಾರ ಸಚಿವ ಸಂಪುಟದ ಸಭೆಯಲ್ಲಿ ತಾತ್ವಿಕ ಅನುಮೋದನೆ ಸಿಕ್ಕ ಕೂಡಲೇ ಆನಂದ್ ಸಿಂಗ್ ಈ ರೀತಿ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯಾಗೋದು ನನಗೆ ಮುಖ್ಯ. ವಿಜಯನಗರ ಜಿಲ್ಲೆಯ ಮುಂದೆ ಸಚಿವ ಸ್ಥಾನ ತೃಣಕ್ಕೆ ಸಮಾನ ಎಂದಿರುವ ಆನಂದ್ ಸಿಂಗ್, ವಿಜಯನಗರ ಜಿಲ್ಲೆ ಘೋಷಣೆ ಮಾಡಿದ ಯಡಿಯೂರಪ್ಪ ವಿಜಯನಗರದ ವೀರಪುತ್ರ ಎಂದು ಭಾವುಕರಾದರು.
ಮನೆಯಲ್ಲಿ ಅಣ್ಣ-ತಮ್ಮಂದಿರು ಬೇರೆಯಾದರೆ ನೋವು ಇರುತ್ತದೆ. ಜಿಲ್ಲೆ ವಿಭಜನೆ ಆದರೆ ಭಿನ್ನಾಭಿಪ್ರಾಯ ಇರೋದಿಲ್ವಾ? ಶಾಸಕ ಸೋಮಶೇಖರ ರೆಡ್ಡಿ ಜತೆಗೆ ಮಾತನಾಡುವೆ. ಈಗಾಗಲೇ ಯಡಿಯೂರಪ್ಪ ಕೂಡ ರೆಡ್ಡಿ ಜತೆ ಮಾತನಾಡಿದ್ದಾರೆ. ಜಿಲ್ಲೆಯ ವಿಚಾರದಲ್ಲಿ ಪ್ರತಿಷ್ಠೆ ಬೇಡ. ನಾವೆಲ್ಲರೂ ಅಣ್ಣ-ತಮ್ಮಂದಿರು ಎನ್ನುವ ಮೂಲಕ ಸೋಮಶೇಖರ ರೆಡ್ಡಿ ಅವರ ಮನವೊಲಿಸುವ ಯತ್ನವನ್ನು ಆನಂದ ಸಿಂಗ್ ಮಾಡಿದರು.
ವಿಜಯಯಪುರವನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ತಾತ್ವಿಕ ಅನುಮೋದನೆ ಪಡೆದು ಬೆಂಗಳೂರಿಂದ ಹೊಸಪೇಟೆಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿಯುತ್ತಿದ್ದಂತೆ ಆನಂದ ಸಿಂಗ್ಗೆ ನೂರಾರು ಜನರು ಹೂವಿನ ಮಳೆ ಸುರಿಸಿ ಶುಭಕೋರಿದರು.
ರಾಜ್ಯಕ್ಕೆ ಶೀಘ್ರವೇ ಇನ್ನೊಂದು ಜಿಲ್ಲೆ- ಸಂಪುಟದಲ್ಲಿ ಸಿಕ್ತು ತಾತ್ವಿಕ ಅನುಮೋದನೆ