ಬೆಂಗಳೂರು: ನೆವೆಂಬರ್ 1, ಕನ್ನಡ ರಾಜ್ಯೋತ್ಸವ ದಿನದಂದು ಡಾ.ಪುನೀತ್ ರಾಜ್ಕುಮಾರ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆ ಸಚಿವರಾದ ಆರ್. ಅಶೋಕ್ ಮತ್ತು ಸುನೀಲ್ ಕುಮಾರ್ ಪುನೀತ್ ನಿವಾಸಕ್ಕೆ ತೆರಳಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಅಧಿಕೃತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ರಾಜ್ಯ ಸರ್ಕಾರ ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ರಾಜ್ಯದ ಪ್ರತಿಷ್ಠಿತ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್ ಅವರ ಕುಟುಂಬ ಸದಸ್ಯರಿಗೂ ಆಹ್ವಾನ ನೀಡಲಾಗಿದೆ. ಕುಟುಂಬದಿಂದ 50 ಜನ ಭಾಗಿಯಾಗುತ್ತಿದ್ದು, ಅವರಿಗೆ ವಿಶೇಷ ಪಾಸ್ಗಳನ್ನು ನೀಡಲಾಗಿದೆ.
ಈ ವೇಳೆ ಅಶ್ವಿನಿ ಪುನೀತ್ ಅವರ ಜತೆಗೆ ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಪತ್ನಿ ಹಾಜರಿದ್ದರು. ಅವರೊಂದಿಗೆ ಕಾರ್ಯಕ್ರಮದ ಬಿಗಿ ಬಂದೋಬಸ್ತ್ ಕುರಿತು ಸಚಿವರು ಕೆಲಕಾಲ ಚರ್ಚೆ ನಡೆಸಿದರು.
‘ಕರ್ನಾಟಕ ರತ್ನ’ ಪ್ರಶಸ್ತಿ ಕಾರ್ಯಕ್ರಮಕ್ಕೆ ತೆಲುಗು ನಟ ಜೂ.ಎನ್ಟಿಆರ್ಗೆ ಸರ್ಕಾರದ ವತಿಯಿಂದ ವಿಶೇಷ ಆಹ್ವಾನ ನೀಡಲಾಗಿತ್ತು. ಪುನೀತ್ ರಾಜ್ಕುಮಾರ್ ಕುಟುಂಬ ಸದಸ್ಯರು ಕೂಡ ಜೂ.ಎನ್ಟಿರ್ ಭೇಟಿಯಾಗಿ ಆಹ್ವಾನಿಸಿದ್ದರು. ಇದೀಗ ಅವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗುವುದಕ್ಕಾಗಿ ಬೆಂಗಳೂರಿಗೆ ಮುಂಚಿತವಾಗಿ ಆಗಮಿಸಿದ್ದಾರೆ.