ಮುಂಬೈ: ಸೈದ್ಧಾಂತಿಕ ಭಿನ್ನಾಭಿಪ್ರಾಯದ ಪಕ್ಷಗಳ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರಕ್ಕೆ ಒಂದೊಂದೇ ಸಂಕಷ್ಟಗಳು ಶುರುವಾಗಿದೆ. ಸಚಿವ ಸಂಪುಟದಲ್ಲೂ ಇಂತಹ ಭಿನ್ನತೆ ಕಾಣಿಸಿಕೊಂಡಿದ್ದು, ಇದಕ್ಕೆ ಜನತೆಯ ಪ್ರತಿಕ್ರಿಯೆ ಕೂಡ ಖಾರವಾಗಿಯೇ ಇದೆ.
ಉದ್ಧವ್ ಠಾಕ್ರೆ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ, 1993ರ ಮುಂಬೈ ಸರಣಿ ಸ್ಪೋಟದ ಅಪರಾಧಿ ಯಾಕುಬ್ ಮೆಮೋನ್ಗೆ ಗಲ್ಲು ಶಿಕ್ಷೆ ವಿಧಿಸಬಾರದು ಎಂದು ಬೇಡಿಕೆ ಇಟ್ಟು 2015ರಲ್ಲಿ ಬರೆದಿದ್ದ ಹಳೆಯ ಪತ್ರವೊಂದು ವೈರಲ್ ಆಗಿದೆ. ಈ ಬೆಳವಣಿಗೆ ಉದ್ಧವ್ ಸಚಿವ ಸಂಪುಟದ ಸಹೋದ್ಯೋಗಿ ಒಬ್ಬರನ್ನು ಕೆಂಡಾಮಂಡಲರನ್ನಾಗಿಸಿದೆ.
ಹೀಗೆ ಕೆಂಡಾಮಂಡಲವಾದ ಸಚಿವನ ಹೆಸರು ಅಸ್ಲಾಂ ಶೇಖ್. ಯಾಕುಬ್ ಮೆಮೋನ್ ಪರ ಬ್ಯಾಟಿಂಗ್ ಮಾಡಿದ್ದ ವಿವರ ಈಗ ಮತ್ತೆ ಮುನ್ನೆಲೆಗೆ ಬಂದುದೇ ಶೇಖ್ ಕೋಪಕ್ಕೆ ಕಾರಣ. ಈ ಪತ್ರ ವೈರಲ್ ಆಗಿದ್ದರ ಹಿಂದೆ ಬಿಜೆಪಿಯವರ ಕೈವಾಡ ಇದೆ. ನಾಥುರಾಮ್ ಗೋಡ್ಸೆ ದೇವಸ್ಥಾನ ಕಟ್ಟುವವರು ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿರುತ್ತಾರೆ ಎಂಬುದು ಶೇಖ್ ಆರೋಪ.
ವಾಸ್ತವದಲ್ಲಿ ಶೇಖ್ 2015ರ ಜುಲೈನಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು ಯಾಕುಬ್ ಮೆಮೋನ್ಗೆ ಗಲ್ಲು ಶಿಕ್ಷೆಯಿಂದ ವಿನಾಯಿತಿ ಕೊಡುವಂತೆ ಕೋರಿದ್ದ.ಆದಾಗ್ಯೂ, ರಾಷ್ಟ್ರಪತಿಯವರು ಈ ಅರ್ಜಿಯನ್ನು ತಿರಸ್ಕರಿಸಿದ್ದರು. 2015ರ ಜುಲೈ 30ರಂದು ನಾಗಪುರ ಜೈಲಿನಲ್ಲಿ ಯಾಕುಬ್ ಮೆಮೋನ್ಗೆ ಗಲ್ಲು ಶಿಕ್ಷೆ ಜಾರಿಯಾಗಿತ್ತು. (ಏಜೆನ್ಸೀಸ್)