ಕೊಪ್ಪಳ: ಪಂಚ ಗ್ಯಾರಂಟಿಗಳು ಜನರಿಗೆ ಅನುಕೂಲವಾಗಿದ್ದು, ಉತ್ತರ ಕರ್ನಾಟಕದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಪಕ್ಕಾ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಅಧಿಕಾರಕ್ಕೆ ಬಂದ ವರ್ಷದಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಶಕ್ತಿ ಯೋಜನೆಯಡಿ 163 ಕೋಟಿ ಜನ ಪ್ರವಾಸ, ಗೃಹ ಜ್ಯೋತಿಯಡಿ 1.66 ಕೋಟಿ ಗ್ರಾಹಕರು, ಗೃಹ ಲಕ್ಷಿ$್ಮ ಯೋಜನೆ 1.21 ಕೋಟಿ ಜನರಿಗೆ ತಲುಪಿದೆ. 1.28 ಕೋಟಿ ಕುಟುಂಬಗಳು ಅನ್ನಭಾಗ್ಯ ಯೋಜನೆ ಲಾಭ ಪಡೆದಿವೆ. ಈ ಎಲ್ಲ ಯೋಜನೆಗಳ ಮೂಲಕ ಕುಟುಂಬವೊಂದಕ್ಕೆ ತಿಂಗಳಿಗೆ ಐದು ಸಾವಿರ ರೂ. ದೊರೆಯುತ್ತಿದೆ. 1.10 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿದ್ದು, ಇದೊಂದು ಕ್ರಾಂತಿಕಾರಿ ಬದಲಾವಣೆ ಎಂದರು.
ಪ್ರಧಾನಿ ನರೇಂದ್ರ ಮೋದಿ 75 ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತ್ತಾರೆ. ಬಡವರಿಗೆ ಮನೆ, ಸಾಲಮನ್ನಾ, ಪಡಿತರ ವಿತರಣೆ, ವಿವಿಧ ಮಾಸಾಶನ ಯೋಜನೆಗಳನ್ನು ನೀಡಿದ್ದು ಕಾಂಗ್ರೆಸ್. ನಾವೇನು ಮಾತನಾಡುತ್ತಿದ್ದೇವೆ ಅದನ್ನೇ ಮೋದಿ ಫಾಲೋ ಮಾಡುತ್ತಿದ್ದಾರೆ. ನಾವು ಸಂವಿಧಾನ ಬಗ್ಗೆ ಮಾತನಾಡಿದರೆ ಅದರ ಬಗ್ಗೆ ಮಾತನಾಡಿದರು. ಗ್ಯಾರಂಟಿ ಕೊಟ್ಟಿದ್ದೇವೆ. ಅವರು ಮೋದಿ ಗ್ಯಾರಂಟಿ ಅನ್ನುತ್ತಿದ್ದಾರೆ. ಬಿಜೆಪಿಗರು ಸಂವಿಧಾನ ಬದಲಿಸುತ್ತೇವೆ ಎಂದರು. ಸಂವಿಧಾನ ಪ್ರತಿ ಸುಟ್ಟು ಹಾಕಿದರು. ಆಗೆಲ್ಲ ಇವರ ದೇಶಭಕ್ತಿ ಎಲ್ಲಿತ್ತು ? ನಾವೆಲ್ಲ ಬ್ರಿಟಿಷರ ಗುಂಡಿಗೆ ಎದೆ ಒಡ್ಡಿ ಭಾರತ್ ಮಾತಾ ಕಿ ಜೈಕಾರ ಹಾಕಿದವರು ಎಂದು ಕುಟುಕಿದರು.
ಕಲ್ಯಾಣ ಕರ್ನಾಟಕದ 371 (ಜೆ) ಮೀಸಲು ನಿಲ್ಲಿಸಲು ನಾನು ಪತ್ರ ಬರೆದಿಲ್ಲ. ಕೆಲವರು ದುರುದ್ದೇಶದಿಂದ ಸುದ್ದಿ ಹರಡಿಸಿದ್ದಾರೆ. ಕನಸಲ್ಲೂ ಮೀಸಲು ಸ್ಥಗಿತ ಸಾಧ್ಯವಿಲ್ಲ. ಮೀಸಲಾತಿ ಅನುಷ್ಠಾನದಲ್ಲಿನ ಸಮಸ್ಯೆಗಳ ಬಗ್ಗೆ ಸಿಎಂ ಜತೆ ಚರ್ಚಿಸಿ ಪರಿಹಾರಕ್ಕೆ ಯತ್ನಿಸುವೆ. ನನ್ನ ಪತ್ರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ನಾನು ಮೀಸಲಾತಿ ಪರವಾಗಿರುವೆ.
ಎಚ್.ಕೆ.ಪಾಟೀಲ್. ಕಾನೂನು ಸಚಿವ.