ಬೆಳಗಾವಿ: ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಕೋಳಿ ಮತ್ತು ಕ್ಯಾಸ್ತಿ ತೋಟದ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಹಗಲು, ರಾತ್ರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ನಮ್ಮ ಮನೆಗಳಿಗೆ ಹಾನಿಯಾಗುತ್ತಿದೆ.
ಮನೆಗಳಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಸುಮಾರು 25ರಿಂದ 30 ಅಡಿಗಳ ವರೆಗೆ ಕಂದಕಗಳು ನಿರ್ಮಾಣವಾಗಿವೆ. ಮಕ್ಕಳನ್ನು ಶಾಲೆಗೆ ಹಾಗೂ ಹೊರಗಡೆ ಕಳುಹಿಸುವುದಕ್ಕೆ ಭಯವಾಗುತ್ತಿದೆ. ಹಾಗಾಗಿ, ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಶಂಕರ ಗಾಯಕವಾಡ, ವಸಂತ ಕಡಟ್ಟಿ, ಮಹಾದೇವ ಕೋಳಿ, ಸಂಜಯ ಧಾವಣೆ, ಸಹದೇವ ಕೋಳಿ ಇತರರಿದ್ದರು.