ಸೊರಬ: ಮನಸ್ಸು ಉಳ್ಳವನು ಮನುಷ್ಯ. ಚಂಚಲ ಸ್ವಭಾವದ ಮನಸ್ಸಿಗೆ ಮಂತ್ರದ ಮೂಲಕ ಸಂಸ್ಕಾರ ಕೊಟ್ಟು ಜೀವನ ಸಾರ್ಥಕ ಗೊಳಿಸುವವನೇ ಗುರು ಎಂದು ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗುರುವಾರ ತಾಲೂಕಿನ ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಶತಾಯುಷಿ ಶ್ರೀ ನಿಜಗುಣ ಶಿವಾಚಾರ್ಯ ಸ್ವಾಮೀಜಿಯ 14ನೇ ವರ್ಷದ ಪುಣ್ಯಾರಾಧನೆಯಲ್ಲಿ ಮಾತನಾಡಿ, ಶಾಸ್ತ್ರಗಳು ಗುರುವನ್ನು ಅತಿಯಾಗಿ ಹೊಗಳಿವೆ. ದೇವರಿಗಿಂತಲೂ ಗುರು ಹೆಚ್ಚು. ಗುರು ಎಲ್ಲರ ಜೀವನದಲ್ಲಿಯೂ ಮಹತ್ತರ ಪಾತ್ರ ವಹಿಸುತ್ತಾನೆ. ಗುರುವಿರದ ಜೀವನವೇ ಇಲ್ಲ ಎಂದರು.
ಸಂಸ್ಕಾರ ಹೊಂದಿದ ಮನಸ್ಸು ಸತ್ಕಾರ್ಯಗಳನ್ನು ಮಾಡಲು ಶಕ್ತವಾಗುತ್ತದೆ. ಆದ್ದರಿಂದ ಗುರುವಿನ ಅಡಿಯಾಳಾಗಿ ಸೇವೆ ಸಲ್ಲಿಸುವ ಮೂಲಕ ಗುರುಕೃಪೆಗೆ ಪಾತ್ರರಾಗಬೇಕು. ಇಂದು ಜಗತ್ತು ಬದಲಾವಣೆ ಹಂತದಲ್ಲಿದೆ. ಅದಕ್ಕಾಗಿಯೇ ಸೃಷ್ಟಿಯಲ್ಲಿ ಹಲವಾರು ವೈಪರಿತ್ಯಗಳು ನಡೆಯುತ್ತಿವೆ. ಇವುಗಳಿಗೆ ನಾವೆಲ್ಲರೂ ಸಾಕ್ಷಿ ಎಂದು ಹೇಳಿದರು.
ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಯಾವಾಗಲೂ ತನ್ನ ಸ್ವ ಸ್ಥಾನದಿಂದ ವಿಮುಖನಾಗಬಾರದು. ದೇಹದಲ್ಲಿರುವ ಹಲ್ಲು, ಕೂದಲು, ಉಗುರು ಶರೀರದಿಂದ ಬೇರ್ಪಟ್ಟಾಗ ಅವುಗಳಿಗೆ ಯಾವುದೇ ಬೆಲೆ ಇರುವುದಿಲ್ಲವೋ ಹಾಗೆಯೇ ದೇಹವು ಆತ್ಮದಿಂದ ಬೇರ್ಪಟ್ಟಾಗ ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ ಎಂದು ತಿಳಿಸಿದರು.
ಗುರುಗಳ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಜಂಗಮ ಪೂಜೆ ನೆರವೇರಿದವು. ಸ್ಥಳಿಯರಾದ ಕುಮಾರಸ್ವಾಮಿ, ಮಲ್ಲನಗೌಡ, ಚಿತ್ರಕಲಾ, ನಿಜಗುಣ ಸ್ವಾಮಿ ಇದ್ದರು.