ಕಂಪ್ಲಿ: ಹೊರಗಿನಿಂದ ಮತ್ತು ಗುಳೆ ಹೋಗಿ ಬಂದವರ ಮೇಲೆ ಗ್ರಾಮೀಣ ಟಾಸ್ಕ್ಫೋರ್ಸ್ ತಂಡ ನಿಗಾವಹಿಸಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಸೂಚಿಸಿದರು.
ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಮತ್ತು ಟಾಸ್ಕ್ ಫೋರ್ಸ್ ಟೀಮ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕರೊನಾ ಕೇಸ್ಗಳು ಹೆಚ್ಚುತ್ತಿವೆ. ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರ ಆರೋಗ್ಯದ ಮೇಲೆ ನಿಗಾವಹಿಸಬೇಕು. ಅವರಿರುವ ಪರಿಸರ ಸ್ವಚ್ಛಗೊಳಿಸಬೇಕು. ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರು ಹೊರಗಡೆ ತಿರುಗಾಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. 18 ವರ್ಷದವರಿಗೂ ಕರೊನಾ ಲಸಿಕೆ ನೀಡಲಿದ್ದು ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಲ್ಲದ ಅಂಗಡಿಗಳ ತೆರೆಯುವುದು, ಅನಗತ್ಯವಾಗಿ ತಿರುಗಾಡುವ ಜನರನ್ನು ನಿಯಂತ್ರಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ಟಾಸ್ಕ್ಫೋರ್ಸ್ ಟೀಮ್ ಸದಸ್ಯರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ನಿಯಂತ್ರಣಕ್ಕಾಗಿ ಕೆಲಸ ಮಾಡುವವರಿಗೆ ಜನ ಸಹಕರಿಸುತ್ತಿಲ್ಲ. ಅಂಗಡಿ ಮುಚ್ಚುವಂತೆ, ಕರೊನಾ ನಿಯಮಗಳ ಪಾಲನೆ ಕುರಿತು ಹೇಳಿದರೆ ಬೈಯ್ಯುತ್ತಾರೆ. ಕರ್ತವ್ಯ ಸಮಯದಲ್ಲಿ ಪೊಲೀಸರನ್ನು ಒದಗಿಸುವಂತೆ ಮನವಿ ಮಾಡಿದರು. ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ತಾಪಂ ಇಒ ಬಿ.ಬಾಲಕೃಷ್ಣ, ಪಿಎಸ್ಐ ವಿರೂಪಾಕ್ಷಪ್ಪ, ಮುಖ್ಯಾಧಿಕಾರಿ ರಮೇಶ್ ಬಡಿಗೇರ್, ಶಿರಸ್ತೇದಾರ್ ರೇಖಾಮಠ, ಕಂದಾಯ ನಿರೀಕ್ಷಕ ಎ.ಗಣೇಶ್, ನೋಡಲ್ ಅಧಿಕಾರಿಗಳಾದ ನವೀನ್, ಚಂದ್ರಶೇಖರ್ ಇತರರಿದ್ದರು.