ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ಮತ್ತಷ್ಟು ಕಾರ್ಮಿಕರು ತಮ್ಮ ತಾಯ್ನಡಿಗೆ ತೆರಳಿದರು.
ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ 1,164 ವಲಸೆ ಕಾರ್ಮಿಕರು ಭಾನುವಾರ ಮಧ್ಯಾಹ್ನ 2ಕ್ಕೆ ನಗರದ ಅಶೋಕಪುರಂ ರೈಲು ನಿಲ್ದಾಣದಿಂದ ಶ್ರಮಿಕ್ ರೈಲಿನಲ್ಲಿ ಬಿಹಾರದ ಪುರ್ನಿಯಾಗೆ ಪ್ರಯಾಣ ಬೆಳೆಸಿದರು. ಇದು 2488 ಕಿ.ಮೀ. ಪ್ರಯಾಣವಾಗಿದ್ದು, ಅಲ್ಲಿಗೆ ಮೇ 26ರಂದು ಮಧ್ಯಾಹ್ನ 3.10ಕ್ಕೆ ತಲುಪಲಿದೆ. ಈ ರೈಲು 22 ಬೋಗಿ ಹೊಂದಿದ್ದು, ಪ್ರತಿ ಬೋಗಿಯಲ್ಲೂ 72 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಕೋಚ್ಗಳಲ್ಲೂ ಪ್ರಯಾಣಿಕರು ಮಲಗಿಕೊಂಡು ಹೋಗುವ ವ್ಯವಸ್ಥೆವಿದೆ. ಪರಸ್ಪರ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಇದರಲ್ಲಿದ್ದು, ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯ. ಪ್ರಯಾಣಿಕರ ಭದ್ರತೆಗಾಗಿ 6 ಆರ್ಪಿಎಫ್ ತಂಡವನ್ನು ನಿಯೋಜಿಸಲಾಗಿದೆ. ಮಾರ್ಗಮಧ್ಯೆ ಪ್ರಯಾಣಿಕರಿಗೆ ಐಆರ್ಸಿಟಿಸಿ ಉಚಿತವಾಗಿ ತಿಂಡಿ, ಊಟದ ವ್ಯವಸ್ಥೆ ಮಾಡಿದೆ.
ಈ ವಲಸೆ ಕಾರ್ಮಿಕರು ಮಂಡ್ಯ, ಮದ್ದೂರ, ಹುಣಸೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಶೋಕಪುರಂ ನಿಲ್ದಾಣದಲ್ಲಿ ಇವರನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆಗೊಳಪಡಿಸಲಾಯಿತು. ಬಳಿಕ ಆರೋಗ್ಯದ ಕುರಿತು ದೃಢೀಕರಣ ಪ್ರಮಾಣ ಪತ್ರ ನೀಡಲಾಯಿತು. ಆಧಾರ್ ಕಾರ್ಡ್, ಸೇವಾ ಸಿಂಧು ವೆಬ್ಸೈಟ್ನಲ್ಲಿ ನೋಂದಾಯಿಸಿದ್ದ ಸಂಖ್ಯೆ ಹಾಗೂ ವಿಳಾಸದ ದಾಖಲೆ ಪರಿಶೀಲನೆ ಮಾಡಲಾಯಿತು. ಕಾರ್ಮಿಕರಿಗೆ ರೋಟರಿ ಕ್ಲಬ್ ಸದಸ್ಯರು ಉಪಾಹಾರ, ನೀರಿನ ಬಾಟಲಿ ವಿತರಿಸಿದರು.