ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಗಲಿಕೆಯಿಂದ ನೊಂದಿದ್ದ ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬಕ್ಕೆ ಜೂನಿಯರ್ ಸರ್ಜಾ ಆಗಮನದಿಂದ ಬಹಳ ಖುಷಿಯಾಗಿದೆ. ಅಭಿಮಾನಿಗಳು ಮತ್ತು ಕುಟುಂಬದವರ ಆಸೆಯಂತೆಯೇ ಮೇಘನಾಗೆ ಇಂದು ಗಂಡು ಮಗು ಜನಿಸಿದೆ.
ಇದೇ ಖುಷಿಯಲ್ಲಿ ಮಾತನಾಡಿದ ಮೇಘನಾ ತಾಯಿ ಪ್ರಮೀಳಾ ಜೋಷಾಯಿ, ಗಂಡಾಗಿ ಹುಟ್ಟಿದರೆ ಸಂಗೊಳ್ಳಿ ರಾಯಣ್ಣ, ಹೆಣ್ಣಾಗಿ ಹುಟ್ಟಿದರೆ ಕಿತ್ತೂರು ರಾಣಿ ಚೆನ್ನಮ್ಮ ಆಗಲಿ ಅಂತ ಆಶಿಸಿದ್ದೆ. ಸಮಾಜಕ್ಕೆ ಹಾಗೂ ಕನ್ನಡ ಮಣ್ಣಲ್ಲಿ ಉತ್ತಮ ಕೆಲಸ ಮಾಡುವ ವೀರ ಯೋಧನಂತೆ ನನ್ನ ಮೊಮ್ಮಗ ಬೆಳಯಲಿ ಎಂದು ಹಾರೈಸಿದ್ದಾರೆ.
ಪುನರಪಿ ಜನನ, ಪುನರಪಿ ಮರಣಂ ಅನ್ನೋ ಹಾಗೆ 2017ರ ಅಕ್ಟೋಬರ್ 22ರಂದು ಚಿರು ಹಾಗೂ ಮೇಘನಾ ಎಂಗೇಜ್ಮೆಂಟ್ ಆಗಿದ್ದರು. ಈಗ ಅದೇ ದಿನ ಮಗು ಜನಿಸಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ತನ್ನಿಷ್ಟದಂತೆ ಪ್ರೀತಿಸಿ ಮದುವೆಯಾದ ಯುವತಿ ಸೋಫಾಸೆಟ್ಗಾಗಿ ಪ್ರಾಣವನ್ನೇ ಕಳೆದುಕೊಂಡಳು..!
ಚಿರು-ಮೇಘನಾ ತುಂಬಾ ಇಷ್ಟ ಪಟ್ಟು ಮದುವೆಯಾಗಿದ್ದರು. ದುಃಖ ಮತ್ತು ಸಂತೋಷ ಎರಡೂ ಇದೆ. ಆದರೆ, ಈಗ ಸಂತೋಷ ಹೆಚ್ಚಿದೆ. ನಮ್ಮನ್ನು ಬಿಟ್ಟು ಹೋದ ಚಿರು ಮತ್ತೆ ಈಗ ಹುಟ್ಟಿ ಬಂದಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.
ನನ್ನ ಮಗಳು ಬೋಲ್ಡ್ ಆ್ಯಂಡ್ ಸ್ಟ್ರಾಂಗ್
ಇದೇ ವೇಳೆ ಮಾತನಾಡಿದ ಸುಂದರ್ ರಾಜ್, ಒಂದೆಡೆ ಕರೊನಾ, ಮತ್ತೊಂದೆಡೆ ಪ್ರವಾಹದಿಂದ ಇಡೀ ಪ್ರಪಂಚವೇ ನಲುಗಿದೆ. ಅದೆಲ್ಲಕಿಂತ ಹೆಚ್ಚು ನೋವನ್ನು ನಾವು ಅನುಭವಿಸಿದೀವಿ. ಕಳೆದ 4 ತಿಂಗಳಿಂದ ಅಷ್ಟು ನೋವು ತಿಂದಿದೀವಿ. ನಿಜಕ್ಕೂ ನನ್ನ ಮಗಳು ಬೋಲ್ಡ್ ಆ್ಯಂಡ್ ಸ್ಟ್ರಾಂಗ್. ಇಂದು ಚಿರುವಿನ ನೆನಪಿನ ಕಾಣಿಕೆ ನಮ್ಮ ಬಾಳಿಗೆ ಬಂದಿದೆ. ಒಳ್ಳೆ ಘಳಿಗೆಯಲ್ಲಿ ಮಗುವಿನ ಜನನವಾಗಿದೆ. ಜೂನಿಯರ್ ಚಿರು ಬರ್ತಾನೆ ಅಂತ ಅಭಿಮಾನಿಗಳು ಆಶಿಸುತ್ತಿದ್ದರು. ಅವರಾಸೆ ಈಗ ನೆರವೇರಿದೆ ಎಂದರು. (ದಿಗ್ವಿಜಯ ನ್ಯೂಸ್)
‘ನನಗೆ ಗಂಡು ಮಗುವೇ ಆಗುತ್ತೆ ನೋಡ್ತಿರು’; ಚಿರು ನುಡಿದ ಭವಿಷ್ಯ ನಿಜವಾಯ್ತು ಎಂದ ಧ್ರುವ