ಮಧುಗಿರಿ: ನೀರಿಗಾಗಿ ಶುದ್ಧ ನೀರಿನ ಘಟಕ ಅವಲಂಬಿಸಿರುವ ದಿನಗಳಲ್ಲೂ ಜನ ಈ ಬಾವಿ ನೀರನ್ನು ಬಳಸದೇ ಬಿಡುವುದಿಲ್ಲ. ಆ ನೀರಿಗಾಗಿ 20 ಅಡಿ ಆಳಕ್ಕೆ ಇಳಿಯುತ್ತಾರೆ. ಬಾವಿಯಲ್ಲಿ ನೀರು ಬತ್ತುತ್ತಿದ್ದರೂ ತಳದ ಜೋಪಿನ ನೀರನ್ನು ಲೋಟದಿಂದ ಕೊಡ ತುಂಬಿಸಿಕೊಳ್ಳುತ್ತಿದ್ದಾರೆ.
ಇದಕ್ಕೆ ಕಾರಣ ಈ ಬಾವಿಯ ನೀರು ಕುಡಿದರೆ ರೋಗ ಮಾಯವಾಗುತ್ತದೆ ಎಂಬ ನಂಬಿಕೆ. ಹೌದು, ಪಟ್ಟಣದ ಕಾರಮರಡಿ ರಸ್ತೆಯಲ್ಲಿರುವ ವಿಶ್ವಕರ್ಮ ಸಮುದಾಯದ ಸ್ಮಶಾನದ ಸಮೀಪದ ಬಾವಿ ಬರಗಾಲದಿಂದ ಬತ್ತಿದ್ದರೂ ತಳದಲ್ಲಿ ಜೋಪಿನ ನೀರು ಹರಿಯುತ್ತಿದೆ. ಈ ನೀರು ಕುಡಿದರೆ ಗ್ಯಾಸ್ಟ್ರಿಕ್ ಸೇರಿ ಹಲವು ಕಾಯಿಲೆಗಳು ಗುಣವಾಗುತ್ತವೆ ಎಂಬುದು ಕೆಲವರ ನಂಬಿಕೆ. ಹಲವು ವರ್ಷಗಳಿಂದ ಈ ಬಾವಿ ನೀರು ಕುಡಿಯುತ್ತಿದ್ದೇವೆ. ನಮಗೆ ಬೇರೆಯ ನೀರು ಕುಡಿದರೆ ಕೈ ಕಾಲು ಹಿಡಿದುಕೊಳ್ಳುತ್ತವೆ ಎನ್ನುತ್ತಾರೆ ಗ್ರಾಮಸ್ಥರು. ಕಾರಮರಡಿ, ಬೆಂಕಿಪುರ ಸೇರಿ ಸುತ್ತಮುತ್ತಲ ಹಿರಿಯರು ಇಂದಿಗೂ ಇದೇ ನೀರು ಕುಡಿಯುತ್ತಾರೆ. 20 ಅಡಿ ಬಾವಿಗೆ ಹಗ್ಗ ಕಟ್ಟಿ ತಳಕ್ಕೆ ಇಳಿದು ಪ್ರತೀ ದಿನ 50ಕ್ಕೂ ಹೆಚ್ಚು ಕೊಡ ನೀರನ್ನು ಲೋಟ ಬಳಸಿ ತುಂಬಿಕೊಂಡು ಹೋಗುತ್ತಿದ್ದಾರೆ.
ಮಳೆಗಾಲದಲ್ಲಿ ನೀರು ಹರಿದಾಗ ಬಾವಿ ತುಂಬುತ್ತದೆ. ಈಗ ಬತ್ತಿದ್ದರೂ ಜೋಪು ನೀರಿಗೆ ಬರವಿಲ್ಲ. ಈ ನೀರು ಔಷಧ ಗುಣ ಹೊಂದಿದೆ ಎಂಬುದು ಕೆಲವರ ನಂಬಿಕೆ ಎಂದರು ಕಾರಮರಡಿ ಗ್ರಾಮಸ್ಥ ರಾಮಣ್ಣ.