ಶಿವಮೊಗ್ಗ: ಉತ್ತಮ ಆಲೋಚನೆಗಳು ಮತ್ತು ಆವಿಷ್ಕಾರಗಳ ಮೂಲಕ ಇಂಜಿನಿಯರ್ಗಳು ಜಗತ್ತನ್ನು ಬದಲಾವಣೆಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್ ಹೇಳಿದರು.
ನಗರದ ಮೀಡಿಯಾ ಹೌಸ್ನಲ್ಲಿ ಗುರುವಾರ ದುರ್ಗಾ ಫೌಂಡೇಷನ್ನಿಂದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಸಲ್ಲಿಸಿದ ಇಂಜಿನಿಯರ್ಗಳಿಗೆ ಸರ್ ಎಂವಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ ಎಂವಿ ಅವರ ಜನ್ಮದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಣೆ ಮಾಡುತ್ತಿದ್ದು, ಅವರು ಸಮಯಪ್ರಜ್ಞೆ ಹೊಂದಿದ್ದರು. ಅರ್ಥಶಾಸ್ತ್ರಜ್ಞರೂ ಆಗಿದ್ದ ಅವರು ಅನೇಕ ಯೋಜನೆಗಳನ್ನು ನೀಡಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಇಂಜಿನಿಯರ್ಸ್ಗಳು ಹೊರ ಬರುತ್ತಿದ್ದಾರೆ. ಇಂಜಿನಿಯರ್ಗಳಿಗೆ ಪ್ರೋತ್ಸಾಹ ನೀಡಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ, ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಯೋಜನೆಗಳು ಇಂದಿಗೂ ಜನರಿಗೆ ಅನುಕೂಲ ಕಲ್ಪಿಸುತ್ತಿದ್ದು, ಅವರನ್ನು ಸ್ಮರಿಸುವ ಮೂಲಕ ಗೌರವ ಸಲ್ಲಿಸಬೇಕಿದೆ ಎಂದರು.
ಇಂಜಿನಿಯರ್ಗಳಾದ ಎಚ್.ಎನ್.ನಟೇಶ್, ಎನ್.ಅಣ್ಣಪ್ಪ, ಕೆ.ಸಂತೋಷ್, ಜಿ.ಲೋಕೇಶ್, ಅಭಿಶೇಕ್ ಮಲ್ಲಿಕ್ ಅವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಾಲಿಕೆ ಮಾಜಿ ಸದಸ್ಯೆ ಗೌರಿ ಶ್ರೀನಾಥ್, ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಶಾರದಾ ಶೇಷಗಿರಿಗೌಡ, ಜಯಮಾಲಾ ಪಿ.ವಿ.ಶೆಟ್ಟಿ, ಸುಜಾತಾ, ಯುವ ಕಾಂಗ್ರೆಸ್ ಮುಖಂಡ ಎಂ.ಪ್ರವೀಣ್ಕುಮಾರ್, ಡಿ.ಪುಷ್ಪಕ್ ಕುಮಾರ್, ನೂತನ್ ಕುಮಾರ್, ಕುಮರೇಶ್, ಇರ್ಫಾನ್ ಹಾಜರಿದ್ದರು.