ನಂಜನಗೂಡು: ನಾವುಗಳು ಎಷ್ಟು ಹೆಚ್ಚು ಓದುತ್ತೇವೆಯೋ ಅಷ್ಟು ಚೆನ್ನಾಗಿ ಬರೆಯಬಲ್ಲೆವು ಎಂದು ಅಂಕಣಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುಬ್ಬಿಗೂಡು ರಮೇಶ್ ಹೇಳಿದರು.
ನಗರದ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಹಳಗನ್ನಡವನ್ನು ಮರೆಯದ ಮತ್ತು ಅನುಭವದಿಂದ ಹೊರಹೊಮ್ಮುವ ಕವನಗಳು ಅರ್ಥವನ್ನು ಹೊಂದಿರುತ್ತವೆ. ಲೇಖಕ, ಕವಿಗಳಿಗೆ ಭಾಷೆ ಮೇಲೆ ಹಿಡಿತವಿರಬೇಕು ಎಂದು ಸೂಚಿಸಿದ ಅವರು, ನಿತ್ಯ ನಿರಂತರ ಓದು ನಡೆಯುತ್ತಿರಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನ ಕೊರಳ ನುಡಿಯಾಗದೆ ಕರುಳಿನ ನುಡಿಯಾಗಿ, ನಮ್ಮ ಮಕ್ಕಳಲ್ಲಿ ಕನ್ನಡ ಸಂಸ್ಕೃತಿ ಕುರಿತಾಗಿ ಕನ್ನಡದ ಬೇರನ್ನು ನೀಡಬೇಕಾಗಿರುತ್ತದೆ. ಕನ್ನಡ ಬೇರು ನೆನೆದು ಕನ್ನಡದ ಹೂ, ಬೆಳೆಯಲು ಅರಳಲು ಸಾಧ್ಯ. ನಮ್ಮ ಮಕ್ಕಳಲ್ಲಿ ಕನ್ನಡದ ಪ್ರಜ್ಞೆಯನ್ನು ಬೆಳೆಸಬೇಕು. ಬೇರೆ ಭಾಷೆ ನಮ್ಮ ನಾಲಗೆಯಲ್ಲಿರಲಿ. ಕನ್ನಡದ ಭಾಷೆ ಹೃದಯದಲ್ಲಿ ಇರಬೇಕು. ಇನ್ನು ಪ್ರಾಥಮಿಕ ಶಿಕ್ಷಣ ಹಾಗೂ ಆಡಳಿತ ಭಾಷೆ ಕನ್ನಡವಾಗಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷರಾದ ಪ್ರೊ. ನೀ.ಗಿರಿಗೌಡ, ಮಾನಸ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿದರು.
ಸ್ಪರ್ಧೆ ವಿಜೇತರಿಗೆ ಬಹುಮಾನ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಪ್ರಯುಕ್ತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಂಜನಗೂಡು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷೆ ಲತಾ ಮುದ್ದುಮೋಹನ್, ಬಿಇಒ ಶಿವಲಿಂಗಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಆನಂದಗೌಡ, ಕಸಾಪ ಮೈಸೂರು ತಾಲೂಕು ಅಧ್ಯಕ್ಷ ಎಸ್.ಮಂಜುನಾಥ, ಹುಣಸೂರು ಘಟಕದ ಅಧ್ಯಕ್ಷ ಮಹದೇವ, ಎಚ್.ಡಿ.ಕೋಟೆ ಅಧ್ಯಕ್ಷ ಕನ್ನಡ ಪ್ರಮೋದ್, ತಿ.ನರಸೀಪುರ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಸ ಅಧ್ಯಕ್ಷ ಧರ್ಮ ರತ್ನಾಕರ, ಅನಾಲೆ ತೇಜಸ್ವಿ, ಸಣ್ಣ ಮಂಜುನಾಥ, ರಂಗಸ್ವಾಮಿ ಮತ್ತಿತರರಿದ್ದರು.