ಮಂಗಳೂರು: ಕೊಚ್ಚಿನ್ನಿಂದ ಒಂದು ದಿನ ಮುಂಚಿತವಾಗಿಯೇ ಆಗಮಿಸಿರುವ ಅನಿಲೀಕೃತ ನೈಸರ್ಗಿಕ ಅನಿಲದ (ಎಲ್ಎನ್ಜಿ) ಸ್ವೀಕರಣಾ ಸಮಾರಂಭ ಎಂಸಿಎಫ್ನಲ್ಲಿ ಸೋಮವಾರ ನಡೆದಿದ್ದು, ಡಿಸೆಂಬರ್ ಮೊದಲ ವಾರ ಅಧಿಕೃತವಾಗಿ ಅನಿಲ ಆಧರಿತವಾಗಿ ಕಾರ್ಖಾನೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ.
ಎಂಸಿಎ್ನಲ್ಲಿ ಸೋಮವಾರ ಮಧ್ಯಾಹ್ನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅನಿಲ ಸ್ವೀಕರಿಸಲಾಯಿತು. ಇದರಲ್ಲಿ ಭಾರತೀಯ ಅನಿಲ ಪ್ರಾಧಿಕಾರ (ಗೈಲ್) ಹಾಗೂ ಎಂಸಿಎಫ್ನ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಎಂಸಿಎ್ನಲ್ಲಿ ಕೆಲ ವರ್ಷಗಳ ಹಿಂದೆಯೇ ಸ್ಥಾಪಿಸಲಾಗಿರುವ ಅನಿಲ ಆಧಾರಿತ ಯೂರಿಯಾ ಉತ್ಪಾದನಾ ಸ್ಥಾವರದ ವಿವಿಧ ಯಂತ್ರೋಪಕರಣಗಳನ್ನು ಹಂತ ಹಂತವಾಗಿ ಚಾಲನೆಗೆ ಒಳಪಡಿಸುವ ಕಾರ್ಯ ಪ್ರಾರಂಭಗೊಂಡಿದೆ.
ವೆಚ್ಚ ಅಧಿಕ ಹಾಗೂ ಪರಿಸರಕ್ಕೆ ಮಾರಕವಾಗುವ ಕಾರಣದಿಂದ ರಸಗೊಬ್ಬರ ಉತ್ಪಾದನೆಗೆ ನಾಫ್ತಾ ಬದಲು ನೈಸರ್ಗಿಕ ಅನಿಲ ಬಳಸುವುದನ್ನು ಕಡ್ಡಾಯಗೊಳಿಸಿದ್ದರಿಂದ ಗ್ಯಾಸ್ ಪೈಪ್ಲೈನ್ ಮೂಲಕ ಅನಿಲ ತರಿಸಲು ಉದ್ದೇಶಿಸಲಾಗಿತ್ತು. ಹೀಗಾಗಿ, ಅನಿಲ ದೊರೆತು ಆ ಮೂಲಕ ರಸಗೊಬ್ಬರ ತಯಾರಿಸಲು ಅನುಕೂಲವಾಗುವ ನೆಲೆಯಲ್ಲಿ ಎಂಸಿಎ್ನಲ್ಲಿ ಈಗಾಗಲೇ ಅದಕ್ಕೆ ಪೂರಕವಾದ ಸ್ಥಾವರವನ್ನು ಸ್ಥಾಪಿಸಲಾಗಿದೆ.
ನಾಫ್ತಾ ಬಳಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ 2014ರ ಸೆ.30ರಿಂದ ಎಂಸಿಎ್ನಲ್ಲಿ ಯೂರಿಯಾ ಮತ್ತಿತರ ರಸಗೊಬ್ಬರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವರ ಮಧ್ಯಪ್ರವೇಶದಿಂದಾಗಿ ನೈಸರ್ಗಿಕ ಅನಿಲ ಲಭ್ಯವಾಗುವವರೆಗೆ ನ್ತಾಾ ಬಳಸಲು ಕೇಂದ್ರ ಸಚಿವ ಸಂಪುಟ ಅದೇ ವರ್ಷದ ಡಿ.10ರಂದು ಒಪ್ಪಿಗೆ ನೀಡಿತ್ತು.
ಯೂರಿಯಾ ಉತ್ಪಾದನೆ ಸರಾಗ:
ಅನಿಲ ಕೊಚ್ಚಿನ್ನಿಂದ ಬರುವ ಹಿನ್ನೆಲೆಯಲ್ಲಿ ಎಂಸಿಎಫ್ನ ನಾಫ್ತಾ ಆಧರಿತ ಯೂರಿಯಾ ಉತ್ಪಾದನಾ ಘಟಕವನ್ನು ಅಕ್ಟೋಬರ್ ಮೊದಲ ವಾರವೇ ಸ್ಥಗಿತಗೊಳಿಸಲಾಗಿದೆ. ಹೊಸ ಘಟಕ ಡಿಸೆಂಬರ್ನಲ್ಲಿ ಕಾರ್ಯಾರಂಭಿಸಲಿದ್ದು, ಇನ್ನು ಮುಂದೆ ಅದರಲ್ಲೇ ಯೂರಿಯಾ ಉತ್ಪಾದನೆಯಾಗಲಿದೆ. ಎಂಸಿಎಫ್ನಲ್ಲಿ ಡಿಎಪಿ ಮತ್ತಿತರ ಉತ್ಪನ್ನಗಳು ಎಂದಿನಂತೆ ಉತ್ಪಾದನೆಯಾಗುತ್ತಿವೆ.