ಬೆಟ್ಟದಪುರ: ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುವ ಮಹಿಳೆಯರು ಸದಾ ಯಶಸ್ಸಿನ ಭರವಸೆಯನ್ನು ಹೊಂದಿರಬೇಕು ಎಂದು ಎಸ್ಎಂಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ವಿ ಛಾಯಾ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೊಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಅಜ್ಜಿಯಾಗಿ ಹಲವು ಪಾತ್ರಗಳನ್ನು ನಿರ್ವಹಿಸುವುದರ ಜತೆಗೆ ಉದ್ಯೋಗ ಮಾಡುವ ಸಂಸ್ಥೆಯಲ್ಲಿ ಸಹೋದ್ಯೋಗಿಯಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿಭಾಯಿಸಬೇಕಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಬದುಕಿನಲ್ಲಿ ಭರವಸೆ ಮುಖ್ಯವಾಗಿದೆ ಎಂದರು.
ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಮನೆಯಲ್ಲಿ ಮಹಿಳೆಯಿದ್ದರೆ ಆ ಕುಟುಂಬ ಉತ್ತಮ ರೀತಿಯಲ್ಲಿರುತ್ತದೆ. ಮಹಿಳೆಗೆ ಸಾಲ ಕೊಟ್ಟರೆ ಆಕೆ ನಿಷ್ಠೆ ಮತ್ತು ಸ್ವಾಭಿಮಾನದಿಂದ ಮರುಪಾವತಿ ಮಾಡುತ್ತಾಳೆ ಎಂಬ ಭರವಸೆಯಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯಿಂದ ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಕಣಗಾಲು ದಿಡ್ಡಿಯಮ್ಮ ಶಾಲೆ ಶಿಕ್ಷಕಿ ರಿಹಾನಾ ಭಾನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸವಿತಾ, ಗೊರಳ್ಳಿ ಜಗದೀಶ್, ಬಿ.ಜೆ ದೇವರಾಜ್, ಎ.ಎಸ್ ಮಲ್ಲೇಶ್, ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ಇತರರು ಇದ್ದರು.