ಮೂಡಿಗೆರೆ: ರಂಜಾನ್ ತಿಂಗಳ ಉಪವಾಸಕ್ಕೆ 15 ದಿನ ಮುಂಚಿತವಾಗಿ ಆಚರಿಸುವ ಶಬ್ ಎ ಬರಾತ್ ಹಬ್ಬ ಮುಸ್ಲಿಮರಿಗೆ ಸರ್ವ ಶ್ರೇಷ್ಠ ಸ್ಥಾನಮಾನ ಒದಗಿಸಿದೆ ಎಂದು ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಮುಸ್ತಫಾ ಯಮಾನಿ ಹೇಳಿದರು.
ಭಾನುವಾರ ಬದ್ರಿಯ ಜುಮ್ಮಾ ಮಸೀದಿಯಲ್ಲಿ ಏರ್ಪಡಿಸಿದ್ದ ಶಬ್ ಎ ಬರಾತ್ ಕಾರ್ಯಕ್ರಮದಲ್ಲಿ ಯಾಸೀನ್ ಪಾರಾಯಣದ ನಂತರ ದುವಾ ನೆರವೇರಿಸಿ ಮಾತನಾಡಿ, ಕುರಾನ್ನಲ್ಲಿ ಉಲ್ಲೇಖಿಸಿದಂತೆ ಮುಸ್ಲಿಮರು ಹಬ್ಬ ಹರಿದಿನಗಳನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಸರ್ವಧರ್ಮಿಯರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದು ಕೂಡ ಕುರಾನ್ ಕಲಿಸಿಕೊಟ್ಟ ಪಾಠ ಎಂದರು.
ಮುಸ್ಲಿಮರ ಮನೆಗಳಲ್ಲಿ ಹಬ್ಬಗಳ ಆಚರಣೆ ವೇಳೆ ಹತ್ತಿರದ ಮನೆಯವರನ್ನು ಆಹ್ವಾನಿಸಬೇಕೆಂಬ ನಿಯಮವಿದೆ. ನೆರೆಮನೆಯವರು ಹಸಿದಿರುವಾಗ ಹೊಟ್ಟೆ ತುಂಬ ಊಟ ಮಾಡುವವರು ನನ್ನವರಲ್ಲ ಎಂದು ಕುರಾನಿನ ಹದಿಸ್ನಲ್ಲಿ ತಿಳಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಬಾರದು ಎಂದರು.
ಸರ್ವಜನರ ಏಳಿಗೆ ಬಯಸುವ ಮುಸ್ಲಿಂ ಸಮುದಾಯಕ್ಕೆ ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯಲ್ಲಿ ಗಂಡಾಂತರ ಎದುರಾಗುತ್ತಿರುವುದು ನೋವಿನ ವಿಚಾರ. ಪ್ರತಿದಿನ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯ ಸಾಮೂಹಿಕ ಪ್ರಾರ್ಥನೆ ನಡೆಸುವ ವೇಳೆ ಜಗತ್ತಿನ ಸಕಲ ಜೀವರಾಶಿಗಳಿಗೂ ಒಳಿತನ್ನೇ ಬಯಸುತ್ತದೆ ಎಂದು ತಿಳಿಸಿದರು.
ಬದ್ರಿಯಾ ಜುಮ್ಮಾ ಮಸೀದಿಯ ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ನೂತನ ಕಚೇರಿಯನ್ನು ಉದ್ಘಾಟಿಸಲಾಯಿತು. ಮಸೀದಿ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ನಾಸೀರ್, ಮದರಸಾ ಶಿಕ್ಷಕ ಹಸೈನಾರ್ ಮುಸ್ಲಿಯರ್, ಮುಖಂಡರಾದ ಎ.ಎಂ.ಶರೀಫ್, ಇಸ್ಮಾಯಿಲ್, ಇಬ್ರಾಹಿಂ ಯಾದ್ಗಾರ್, ಎಂ.ಎಸ್.ಇಬ್ರಾಹಿಂ, ಪಿ.ಕೆ.ಹಂಝ, ಅಜೀಜ್ ಅರಬ್ಬಿ, ಫಾರೂಕ್, ಬಸೀರ್, ಆರಿಫ್, ಹನೀಫ್ ಅರಬಿ, ವಾಹಿದ್, ಪಿ.ಕೆ.ಹಮೀದ್, ಫಿಶ್ ಮೋಣು, ಎಂ.ಎಚ್.ಮಹಮ್ಮದ್ ಹನೀಫ್ ಹೈದ್ರೋಸ್, ಇಸ್ಮಾಯಿಲ್ ಆಜಾದ್, ಮನ್ಸೂರ್ ಹಾಜಿ ಇತರರಿದ್ದರು.