More

    ಮಾವುತನನ್ನು ಹೆದ್ದಾರಿಯಲ್ಲೇ ಅಟ್ಟಾಡಿಸಿದ ಸಾಕಾನೆ ಮಣಿಕಂಠ !

    ಶಿವಮೊಗ್ಗ: ತಾಲೂಕಿನ ಗಾಜನೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲೇ ಸಕ್ರೆಬೈಲ್ ಆನೆ ಬಿಡಾರದ ಸಾಕಾನೆಯೊಂದು ಮಾವುತನನ್ನು ಅಟ್ಟಾಡಿಸಿರುವ ವಿಡಿಯೋ ವೈರಲ್ ಆಗಿದೆ.
    ಮಣಿಕಂಠ ಆನೆ ಮಾವುತ ಕಲೀಲ್ ಮೇಲೆ ಬೆನ್ನಟ್ಟಿದೆ. ಸ್ವಲ್ಪದರಲ್ಲಿಯೇ ಮಾವುತ ತಪ್ಪಿಸಿಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಮಣಿಕಂಠ ಮತ್ತೆ ಬೆನ್ನಟ್ಟಿ ಪುಂಡಾಟ ಮೆರೆದಿದ್ದಾನೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
    ಮಣಿಕಂಠ ಮಾವುತನನ್ನು ಬಿಡಾರದೊಳಗಿನವರೆಗೆ ಅಟ್ಟಾಡಿಸಿಕೊಂಡು ಬಂದಿದೆ. ತಕ್ಷಣ ವೈದ್ಯರು ಅದನ್ನು ಅರವಳಿಕೆ ಮದ್ದು ನೀಡಿದ್ದಾರೆ. ಅಲ್ಲಿನ ಕುಮ್ಕಿ ಆನೆ ಸಹಕಾರದಿಂದ ಉಳಿದ ಮಾವುತರು ಮತ್ತು ಕಾವಾಡಿಗಳು ಮಣಿಕಂಠನನ್ನು ಕಟ್ಟಿಹಾಕಿದ್ದಾರೆ.
    ದಾಳಿಯಿಂದ ಸ್ವಲ್ಪದರಲ್ಲೇ ಮಹಿಳೆ ಪಾರು: ಪುಂಡಾನೆ ಮಣಿಕಂಠ ಮಾವುತನನ್ನು ಬೆನ್ನಟ್ಟಿದಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಆನೆಗಳ ವೀಕ್ಷಣೆಗೆ ಬಂದಿದ್ದ ಮಹಿಳೆಯೊಬ್ಬರು ಕಾರಿನಲ್ಲಿ ಕುಳಿತಿದ್ದರು. ಮಾವುತ ಕಾರಿನ ಪಕ್ಕವೇ ಸ್ಕೂಟಿಯನ್ನು ಬೀಳಿಸಿ ಓಡಿಹೋಗಿದ್ದು ಮಣಿಕಂಠ ಕಾರಿನ ಪಕ್ಕದಲ್ಲೇ ಬಂದು ಘರ್ಜಿಸಿದ್ದ. ಈ ವೇಳೆ ಕಾರಿನಲ್ಲಿದ್ದ ಮಹಿಳೆ ಇಳಿದು ಪರಾರಿಯಾಗಲು ಯತ್ನಿಸುತ್ತಾರೆ. ಆದರೆ ಮಣಿಮಂಠ ಎದುರೇ ಇದ್ದ ಕಾರಣ ಮತ್ತೆ ಕಾರಿನ ಬಾಗಿಲು ಎಳೆದುಕೊಳ್ಳುತ್ತಾರೆ. ಅಲ್ಲಿಂದ ಮತ್ತೆ ಮಾವುತನನ್ನು ಬೆನ್ನಟ್ಟುತ್ತಿದ್ದಂತೆ ಮಹಿಳೆ ಕಾರಿನಿಂದ ಇಳಿದು ಆತಂಕದಿಂದಲೇ ಓಡಿಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
    ಏನಿದು ಮಣಿಮಂಠನ ಆಕ್ರೋಶ ?:
    ಸಕ್ರೆಬೈಲ್ ಆನೆ ಬಿಡಾರದಿಂದ ಪ್ರವಾಸಿಗರ ವೀಕ್ಷಣೆಗೆ ಸಾಕಾನೆಗಳು ಬೆಳಗ್ಗೆ 11ರವರೆಗೆ ಮುಕ್ತವಾಗಿರುತ್ತವೆ. ವಾರಾಂತ್ಯವಾಗಿದ್ದರಿಂದ ಶನಿವಾರ ಬೆಳಗ್ಗೆಯೂ ವೀಕ್ಷಣೆಗೆ ಮಣಿಕಂಠನನ್ನೂ ಬಿಡಲಾಗಿತ್ತು. ವೀಕ್ಷಣೆ ಅವಧಿ ಮುಗಿದ ಬಳಿಕ ಮಣಿಕಂಠನನ್ನು ಕಾವಾಡಿ ಇಮ್ರಾನ್ ಕಾಡಿಗೆ ಕರೆದೊಯ್ಯುತ್ತಿದ್ದ. ಮಾವುತ ಕಲೀಲ್ ಆತನನ್ನು ಹಿಂಬಾಲಿಸಿ ಸ್ಕೂಟಿಯಲ್ಲಿ ಹೊರಟಿದ್ದ. ಆದರೆ ಮಾವುತನ ಮೇಲೆ ಸಿಟ್ಟಾಗಿದ್ದ ಮಣಿಮಂಠ ಮಾವುತನಿಗಾಗಿ ಕಾದು ಹೆದ್ದಾರಿ ಪಕ್ಕ ತಿರುಗಿ ನಿಲ್ಲುತ್ತಾನೆ. ಹಿಂಬದಿಯಿಂದ ಮಾವುತ ಬರುತ್ತಿರುವುದನ್ನು ಗಮನಿಸಿ ಏಕಾಏಕಿ ಅಟ್ಟಾಡಿಸಿಕೊಂಡು ಬಂದಿದ್ದಾನೆ. ಮಾವುತ ಸ್ಕೂಟಿಯನ್ನು ಹೆದ್ದಾರಿಯಲ್ಲೇ ಬಿಟ್ಟು ಓಡಿಹೋಗಿದ್ದಾನೆ. ಅಲ್ಲಿಂದ ಬಿಡಾರದೊಳಗೆ ಮಾವುತ ತೆರಳಿದ್ದು ಅಷ್ಟಕ್ಕೆ ಸುಮ್ಮನಾಗದೇ ಮತ್ತೆ ಮಾವುತನನ್ನೇ ಬೆನ್ನಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts