ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದ ದೆಹಲಿ ಮೂಲದ ಯುವಕ, ಆಕೆಯ ಮನೆಗೇ ಕನ್ನ ಹಾಕಿ ಪರಾರಿಯಾಗಿದ್ದಾನೆ.
ಕನ್ನಮಂಗಲದ ಸಂದೀಪ್ ವಿಹಾರ ಅಪಾರ್ಟ್ಮೆಂಟ್ ನಿವಾಸಿ 32 ವರ್ಷದ ಯುವತಿ ವಂಚನೆಗೊಳಗಾದವರು. ಕೋರಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವ ಸಂತ್ರಸ್ತ ಯುವತಿ, ಸಹೋದರಿ ಜತೆ ಕನ್ನಮಂಗಲದಲ್ಲಿ ನೆಲೆಸಿದ್ದಾರೆ. ಮದುವೆ ಮಾಡಿಕೊಳ್ಳಲು ವರನ ಹುಡುಕಲು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಖಾತೆ ತೆರೆದು ಸ್ವವಿವರ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ್ದ ದಿಲೀಪ್ ಕುಮಾರ್ ದಾಸ್ ಎಂಬಾತ ಸಂದೇಶ ಕಳುಹಿಸಿದ್ದ. ನನ್ನ ಪುತ್ರ ರೂಪಮ್ ಕುಮಾರ್ ದಾಸ್(33)ಗೆ ಇಷ್ಟವಾಗಿದ್ದೀರಿ ಎಂದು ತಿಳಿಸಿ, ಪುತ್ರನ ಫೋನ್ ನಂಬರ್ ಕೊಟ್ಟಿದ್ದ.
ಬಳಿಕ ಯುವತಿ ಹಾಗೂ ರೂಪಮ್ ಕುಮಾರ್ ಪರಸ್ಪರ ಚಾಟಿಂಗ್ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಕಳೆದ ಮೇ ತಿಂಗಳಲ್ಲಿ ಅನಾರೋಗ್ಯದ ನಿಮಿತ್ತ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಹಣದ ಸಮಸ್ಯೆಯಾಗಿದೆ ಎಂದು ಯುವತಿಗೆ ಹೇಳಿದ್ದ. ಆತನ ಮಾತನ್ನು ನಂಬಿದ್ದ ಯುವತಿ, ಎರಡು ಬಾರಿ ಒಟ್ಟು 1.42 ಲಕ್ಷ ರೂ. ರೂಪಮ್ ಖಾತೆಗೆ ವರ್ಗಾಯಿಸಿದ್ದಳು. ಸೆಪ್ಟೆಂಬರ್ನಲ್ಲಿ ಗುವಾಹಾಟಿಗೆ ಹೋಗಿ ರೂಪಮ್ನನ್ನು ಭೇಟಿಯಾಗಿದ್ದಳು. ಈ ವೇಳೆ ಆತ ಮತ್ತೆ ಹಣ ಕೇಳಿದ್ದು, 23 ಸಾವಿರ ರೂ. ಸಂದಾಯ ಮಾಡಿದ್ದಳು.
ನ.11ರಂದು ಯುವತಿಯನ್ನು ಭೇಟಿ ಮಾಡಲು ಬೆಂಗಳೂರಿಗೆ ರೂಪಮ್ ಕುಮಾರ್ ಬಂದಿದ್ದ. ಇಬ್ಬರೂ ಮೈಸೂರು ಸೇರಿದಂತೆ ಇನ್ನಿತರ ಸ್ಥಳಗಳಿಗೆ ಮೂರ್ನಾಲ್ಕು ದಿನ ಪ್ರವಾಸಕ್ಕೆ ಹೋಗಿ ವಾಪಸ್ ಬಂದಿದ್ದರು. ಈ ವೇಳೆ, ಯಲಹಂಕದಲ್ಲಿ ಸಂಬಂಧಿಕರ ಮನೆ ಇದೆ. ಅವರು ಶುಕ್ರವಾರ (ನ.20) ಬೆಳಗ್ಗೆ ಶಿವನಪೂಜೆ ಹಮ್ಮಿಕೊಂಡಿದ್ದಾರೆ. ಅಲ್ಲಿಗೆ ಹೋಗಬೇಕು ಎಂದು ಯುವತಿಗೆ ಹೇಳಿದ್ದ. ಹೀಗಾಗಿ ಆಕೆ, ಗುರುವಾರ ರಾತ್ರಿ ರೂಪಮ್ನನ್ನು ತನ್ನ ಮನೆಗೆ ಕರೆದೊಯ್ದು, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಳು. ರಾತ್ರಿ ಮಲಗಿದ್ದಾಗ ಮನೆಯಲ್ಲಿದ್ದ 7.90 ಲಕ್ಷ ರೂ. ನಗದು, ಲ್ಯಾಪ್ಟಾಪ್, ದುಬಾರಿ ಬೆಲೆಯ ಕ್ಯಾಮರಾ, ಕ್ಯಾಮರಾ ಲೆನ್ಸ್ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿ, ಹೊರಗಿನಿಂದ ಮನೆಯ ಬಾಗಿಲು ಬೀಗ ಹಾಕಿಕೊಂಡು ಪರಾರಿಯಾಗಿದ್ದ. ಬೆಳಗ್ಗೆ ಎಚ್ಚರವಾದ ಬಳಿಕ ಯುವತಿಗೆ ಗೊತ್ತಾಗಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ರೂಪಮ್ ಕುಮಾರ್ ದಾಸ್ ವಿರುದ್ಧ ಯುವತಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸೀದ್ದಾರೆ.
ಪೂಜೆ ಮಾಡಿ ಮಂಗಳಾರತಿ ಕೊಡಲು ಬಂದ ಪೂಜಾರಿಗೆ ಕಳ್ಳಭಕ್ತ ಕೊಟ್ಟ ಶಾಕ್ ಅಂತಿಂಥದ್ದಲ್ಲ!
ನಾಲೆ ಬಳಿ ಬೈಕ್-ಚಪ್ಪಲಿ ಬಿಟ್ಟು ಹೋದ ಪ್ರೇಮಿಗಳು ಶವವಾಗಿ ಪತ್ತೆ: ಡೆತ್ನೋಟ್ನಲ್ಲಿತ್ತು ಯುವತಿಯ ಆಕ್ರೋಶ!
ಗಂಡನನ್ನು ತೊರೆದು ಬಂದವಳ ಬದುಕಲ್ಲಿ ದುರಂತ! ಇಷ್ಟಪಟ್ಟು ಮದುವೆಯಾದವನ ಜತೆ ಹೆಣವಾದಳು