ಕುಷ್ಟಗಿ: ಮೂರ್ನಾಲ್ಕು ತಿಂಗಳಿಂದ ಮಾಸಾಶನ ಪಾವತಿಯಾಗದೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ ಎಂದು ತಾಲೂಕಿನ ವಿವಿಧ ಗ್ರಾಮಗಳ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ತಹಸೀಲ್ದಾರ್ ಎಂ.ಸಿದ್ದೇಶ ಬಳಿ ಸೋಮವಾರ ಅಲವತ್ತುಕೊಂಡರು.
ಆಧಾರ್ ಜೋಡಣೆಯ ಖಾತೆ ವಿವರ ನೀಡಿದಾಗ್ಯೂ ಮಾಸಾಶನ ಪಾವತಿಯಾಗುತ್ತಿಲ್ಲ. ಮಾಸಾಶನ ಬರುತ್ತಿಲ್ಲ ಎಂಬ ಕಾರಣಕ್ಕೆ ಕುಟುಂಬ ಸದಸ್ಯರ ನಿರ್ಲಕ್ಷ್ಯಕ್ಕೆ ಗುರಿಯಾಗುವಂತಾಗಿದೆ. ಪ್ರತಿ ತಿಂಗಳು ಸಕಾಲಕ್ಕೆ ಪಾವತಿಸುವಂತೆ ಆಗ್ರಹಿಸಿದರು.
ಸಾಮಾಜಿಕ ಭದ್ರತಾ ಯೋಜನೆ ಅಡಿ ನೋಂದಣಿ ಮಾಡಿಸಿರುವ ತಾಲೂಕಿನ 24 ಸಾವಿರ ಫಲಾನುಭವಿಗಳ ಪೈಕಿ 400ಫಲಾನುಭವಿಗಳ ಆಧಾರ್ ಜೋಡಣೆ ಇರುವ ಖಾತೆ ವಿವರ ಸಲ್ಲಿಕೆಯಾಗಿಲ್ಲ. ವಿವರ ಸಲ್ಲಿಸಿರುವವರ ಪೈಕಿ ಕೆಲವರ ಮಾಸಾಶನ ವಿಳಂಬವಾಗುತ್ತಿರುವುದು ಗಮನಕ್ಕಿದೆ. ಅಂತಹ ಫಲಾನುಭವಿಗಳ ಮಾಹಿತಿ ಪಡೆದು ಮಾಸಾಶನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಎಂ.ಸಿದ್ದೇಶ ತಿಳಿಸಿದರು.
ಶಾಸಕ ಭೇಟಿ
ತಹಸಿಲ್ ಕಚೇರಿಗೆ ಭೇಟಿ ನೀಡಿದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸಮಸ್ಯೆ ಆಲಿಸಿದರು. ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಪ್ರತಿ ಗ್ರಾಮದಲ್ಲಿಯೂ ಮಾಸಾಶನ ಸಮಸ್ಯೆಯೇ ಕೇಳಿಬರುತ್ತಿದೆ. ಇಳಿ ವಯಸ್ಸಿನಲ್ಲಿ ಹಿರಿಯರ ಜೀವನ ನಿರ್ವಹಣೆಗೆ ಮಾಸಾಶನ ನೆರವಾಗುತ್ತಿದೆ. ಮೂರ್ನಾಲ್ಕು ತಿಂಗಳು ಸ್ಥಗಿತವಾದರೆ ಜೀವನ ನಡೆಸುವುದಾದರೂ ಹೇಗೆ? ಮಾಸಾಶನ ಪಾವತಿಸುವಲ್ಲಿ ತಾಂತ್ರಿಕ ತೊಂದರೆಗಳಿದ್ದಲ್ಲಿ ಕೂಡಲೇ ಸರಿಪಡಿಸಿ ಸಕಾಲಕ್ಕೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಶಾಸಕ ಬಯ್ಯಪುರ ಹೇಳಿದರು.