ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ಎ ದರ್ಜೆ ದೇವಸ್ಥಾನಗಳಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹವನ್ನು ಸರ್ಕಾರ ನಡೆಸಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ‘ಸಪ್ತಪದಿ’ ಸಾಮೂಹಿಕ ವಿವಾಹ ಲಾಂಛನ ಹಾಗೂ ಕರಪತ್ರ ಶುಕ್ರವಾರ ಬಿಡುಗಡೆ ಮಾಡಿದ ಅವರು, ಹಿಂದು ಧಾರ್ಮಿಕ ಸಂಸ್ಥೆಗಳು ಹಾಗೂ ದತ್ತಿ ಆದಾಯ ಇಲಾಖೆಯಿಂದ ಎಲ್ಲ ವರ್ಗಗಳಿಗೆ ಅನುಕೂಲವಾಗಲೆಂದು ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಪ್ರತಿ ಜೋಡಿ ಸಾಮೂಹಿಕ ವಿವಾಹಕ್ಕೆ ತಗಲುವ 55,000 ರೂ ವೆಚ್ಚವನ್ನು ದೇವಸ್ಥಾನಗಳ ನಿಧಿಯಿಂದಲೇ ಭರಿಸಲಾಗುವುದು ಎಂದು ಹೇಳಿದರು.
ಸಾಮಾನ್ಯ ವರ್ಗದ ಜನರು ಸಾಲ-ಸೋಲ ಮಾಡಿ ವಿವಾಹಕ್ಕೆ ಖರ್ಚು ಮಾಡಿ ನಂತರ ನೆಮ್ಮದಿ ಕಳೆದುಕೊಳ್ಳುವುದು, ಹೊಸ ಜೋಡಿ ಮನೆಗೆ ಭಾರವಾದೆವು ಎಂದು ಕೊರಗುವುದನ್ನು ಮನಗಂಡು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ಸಿಎಂ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಾ. ಮಹರ್ಷಿ ಆನಂದ ಗುರೂಜಿ, ಶಾಸಕರು, ಇಲಾಖೆ ಅಧಿಕಾರಿಗಳು ಇದ್ದರು.